ತಾನು - ವಿಶ್ವನಾಥ್ ಕಳೆದ ನಲವತ್ತು ವರ್ಷಗಳಿಂದ ಸ್ನೇಹಿತರು: ರಾಮಲಿಂಗಾರೆಡ್ಡಿ
ಬೆಂಗಳೂರು : ತಾನು ಮತ್ತು ವಿಶ್ವನಾಥ್ ಅವರು ಕಳೆದ ನಲವತ್ತು ವರ್ಷಗಳಿಂದ ಸ್ನೇಹಿತರು. ನಮ್ಮ ಮನೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷದವರು ಬರುತ್ತಾರೆ. ಅದರಲ್ಲಿ ವಿಶೇಷ ಏನಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದ ಲಕ್ಕಸಂದ್ರದ ತಮ್ಮ ನಿವಾಸದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಶ್ವನಾಥ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರೋ ವಿಚಾರ ನಮಗೆ ಸಂಬಂದಿಸಿದ್ದಲ್ಲ. ಅದು ಅವರ ಪಕ್ಷದ ಅಂತರಿಕ ವಿಚಾರ ಎಂದರು.
ವಿಶ್ವನಾಥ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಮಾಡ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅದಕ್ಕೆ ಪಕ್ಷದ ಅಧ್ಯಕ್ಷರಿದ್ದಾರೆ. ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ನಾನು ಸಚಿವ ಸ್ಥಾನ ಕೊಡುವಂತೆ ಯಾರ ಮನೆ ಬಾಗಿಲಿಗೂ ಹೋಗಿ ಕೇಳಲ್ಲ. ಸಚಿವ ಸ್ಥಾನದ ಆಸೆ ನನಗೆ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು. ಸಚಿವ ಸ್ಥಾನ ನೀಡುವಲ್ಲಿ ತಾರತಮ್ಯ ಅಗಿದೆ ಎಂದು ಮಾತನಾಡಿದ್ದೇನೆ ಅಷ್ಟೇ. ಆದರೆ ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.
ರೋಷನ್ ಬೇಗ್ ಅಮಾನತು ವಿಚಾರದ ಬಗ್ಗೆ ನಾನು ಮಾತಾಡಲ್ಲ ಎಂದ ರೆಡ್ಡಿ, ಮಾಜಿ ಸಿಎಂ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಎಲ್ಲರೂ ದೆಹಲಿಗೆ ಹೋಗಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದರು.
ಬಳ್ಳಾರಿ ಗಣಿಗಾರಿಕೆ ವಿಚಾರಕ್ಕೂ, ಜಿಂದಾಲ್ ವಿಚಾರಕ್ಕೂ ಹೋಲಿಕೆ ಸರಿಯಲ್ಲ. ಈ ವಿಚಾರ ನನಗಿಂತ ಎಚ್.ಕೆ. ಪಾಟೀಲ್ ಅವರಿಗೆ ಚೆನ್ನಾಗಿ ಗೊತ್ತು. ನೀವು ಅವರನ್ನೇ ಕೇಳುವುದು ಉತ್ತಮ. ಈ ವಿಚಾರ ಎಲ್ಲ ಗೊತ್ತಿರುವುದಕ್ಕೆ ನಾನೇನು ಕ್ಯಾಬಿನೆಟ್ ನಲ್ಲಿ ಇಲ್ಲ ಎಂದು ಹೇಳಿದರು.
ಬೋವಿಪಾಳ್ಯದಲ್ಲಿ ಹೈಟೆನ್ಷನ್ ತಂತಿ ಹಾದು ಹೋಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇನ್ನೂರಕ್ಕಿಂತ ಹೆಚ್ಚು ಮನೆಗಳಿವೆ. ಅಲ್ಲಿ ಮನೆ ಕಟ್ಟುವ ಹಾಗಿಲ್ಲ. ಆದರೂ ಅಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅವರು ಸ್ಥಳಾಂತರ ಮಾಡಿದರೆ ನಾವೇ ಮನೆ ಕಟ್ಟಿಸಿಕೊಡುತ್ತೇವೆ ಎಂದು ತಿಳಿಸಿದರು.
ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಗಿದೆ. ನಿನ್ನೆ ದೇವೇಗೌಡರು ತುಂಬಾ ಹೊತ್ತು ಈ ಬಗ್ಗೆ ಮಾತಾಡಿದರು. ರಾಜೀನಾಮೆ ಅಂಗೀಕಾರ ಮಾಡುವಂತೆ ನಾನು ಅವರನ್ನು ಮನವೊಲಿಸುತ್ತಿದ್ದೇನೆ. ರಾಜೀನಾಮೆ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಎಂದರು.
ಶಿಕ್ಷಣ ಇಲಾಖೆ ಬಗ್ಗೆ ನಾನು ಮಾತಾಡಿದ್ದು ನಿಜ. ಈ ಇಲಾಖೆ ಬಹಳ ಪ್ರಮುಖವಾಗಿದ್ದು, ಕಳೆದ ಏಳು ತಿಂಗಳಿನಿಂದ ಖಾಲಿ ಇದೆ. ನಾಯಕ ಇಲ್ಲ ಅಂದರೆ ಒಂದು ರೀತಿಯ ಅರಾಜಕತೆ ಆಗುತ್ತದೆ ಎಂದು ಹೇಳಿದರು.