ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಕುಮಾರ್ ಅಮಾನತಿಗೆ ದಸಂಸ ಆಗ್ರಹ
ಬೆಂಗಳೂರು, ಜೂ.20: ಸರಕಾರಕ್ಕೆ ಕೋಟ್ಯಂತರ ರೂಪಾಯಿಯನ್ನು ನಷ್ಟ ಮಾಡುತ್ತಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಎಸ್.ಎಂ. ಶಿವಕುಮಾರ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಬೇಗೂರು ಮುನಿರಾಜು ಮಾತನಾಡಿ, ಈ ಹಿಂದೆ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರರಾಗಿ ಕೆಲಸ ನಿರ್ವಹಿಸುವಾಗ ಬೇಗೂರು ಹೋಬಳಿ ಎಳ್ಳುಕುಂಟೆ ಗ್ರಾಮದ ಸರಕಾರಿ ಜಾಗವಾದ ಸರ್ವೆ ನಂ. 13 ರಲ್ಲಿ 12 ಎಕರೆ ಜಾಗವನ್ನು ಬಿಡಿಎ ವಶಪಡಿಸಿಕೊಂಡಿದ್ದು, ಇದರ ಪರಿಹಾರ ಹಣವನ್ನು ಭೂಗಳ್ಳರ ಜತೆ ಸೇರಿ ವಾರಸುದಾರರು ಇಲ್ಲದವರಿಗೆ ಹಣವನ್ನ್ನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವಿಚಾರವಾಗಿ ಹಲವು ಬಾರಿ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದ್ದು, ಪ್ರಕರಣದ ಬಗ್ಗೆ ವಿಚಾರಣೆ ಮಾಡಿ ವರದಿ ನೀಡುವಂತೆ ಸಂಬಂಧ ಪಟ್ಟ ಇಲಾಖೆಗೆ ಸೂಚಿಸಿದ್ದರೂ ಯಾವುದೇ ರೀತಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ 15 ದಿನಗಳೊಳಗೆ ಶಿವಕುಮಾರ್ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಕಂದಾಯ ಸಚಿವರ ಮನೆ ಮುಂದೆ ಮತ್ತು ಮುಖ್ಯ ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.