ಬೆಂಗಳೂರು ವಿವಿ: ಅಳಿವಿನಂಚಿನಲ್ಲಿರುವ 3 ಸಾವಿರ ಹಣ್ಣಿನ ಸಸಿ ನೆಡಲು ಯೋಜನೆ
ಬೆಂಗಳೂರು, ಜೂ. 23: ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ವಿಶ್ವ ವಿದ್ಯಾಲಯ ಹಾಗೂ ಬೀಸ್ ಇಂಡಿಯಾ ಸಹಯೋಗದಲ್ಲಿ ಎಸ್ಐಪಿ ಅಕಾಡೆಮಿ ಜಾಗೃತಿ ರ್ಯಾಲಿ ಮತ್ತು ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಿತು.
ರವಿವಾರ ಇಲ್ಲಿನ ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ರ್ಯಾಲಿಯಲ್ಲಿ 500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಳಿವಿನ ಅಂಚಿನಲ್ಲಿರುವ ವಿವಿಧ ಜಾತಿಯ ಹಣ್ಣುಗಳ ಒಂದು ಸಾವಿರ ಸಸಿಗಳನ್ನು ಬೆಂಗಳೂರು ವಿವಿ ಆವರಣದಲ್ಲಿ ನೆಡಲಾಯಿತು.
ಇಂದು ನೆಟ್ಟ ಎಲ್ಲ ಹಣ್ಣಿನ ಸಸಿಗಳ ಪಾಲನೆ, ಪೋಷಣೆ ಕಾರ್ಯವನ್ನು ಸ್ವತಃ ಸಂಸ್ಥೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಈ ವರ್ಷದ ಅಂತ್ಯದ ವೇಳೆಗೆ ಇನ್ನೂ ಮೂರ ಸಾವಿರ ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡುವ ಯೋಜನೆಯನ್ನು ಸಂಸ್ಥೆ ಕೈಗೊಂಡಿದೆ ಎಂದು ಸಂಸ್ಥೆಯ ನರೇಂದ್ರ ತಿಳಿಸಿದರು.
ಜಾಗೃತಿ ರ್ಯಾಲಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಪ್ರೊ.ರೇಣುಕಾಪ್ರಸಾದ್, ಬೀಸ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ಶೇಖರ್ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು.