ಐಎಂಎ ಜ್ಯುವೆಲ್ಲರಿಯಿಂದ 32 ರಿವಾಲ್ವರ್ ಸಹಿತ 11.72 ಕೋ.ರೂ. ಮೌಲ್ಯದ ಸೊತ್ತು ವಶ
ವಿಶೇಷ ತನಿಖಾ ತಂಡದಿಂದ ಮುಂದುವರಿದ ತನಿಖೆ
ಬೆಂಗಳೂರು, ಜೂ.25 :ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಮಾಲಕತ್ವದ ಆಸ್ತಿಗಳ ಮೇಲೆ ಸಿಟ್ ತನಿಖಾಧಿಕಾರಿಗಳು ದಾಳಿ ಮುಂದುವರೆಸಿದ್ದು, ಮತ್ತೆ ಕೆಜಿಗಟ್ಟಲೆ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇಲ್ಲಿನ ಶಿವಾಜಿನಗರ ಲೇಡಿ ಕರ್ಜನ್ ರಸ್ತೆಯಲ್ಲಿರುವ ಮನ್ಸೂರ್ ಒಡೆತನದ ಐಎಂಎ ಗೋಲ್ಡ್ ಮತ್ತು ಐಎಂಎ ಜ್ಯುವೆಲರಿ ಮಳಿಗೆಗಳ ಮೇಲೆ ಶೋಧನೆ ನಡೆಸಿದ ಸಿಟ್ ತಂಡಗಳು, 41.62 ಕೆ.ಜಿ ಚಿನ್ನಾಭರಣ, 14.5 ಕ್ಯಾರೆಟ್ ಡೈಮಂಡ್, 72.24 ಕೆ.ಜಿ ಬೆಳ್ಳಿ, 60 ಕ್ಯಾರೆಟ್ ಹರಳುಗಳು, 58 ಗುಂಡುಗಳೊಂದಿಗೆ .32 ರಿವಾಲ್ವರ್ ಮತ್ತು 13.45 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ಜೂ.24ರಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ, ಎಸ್.ಗಿರೀಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಜೂ.22ರ ದಾಳಿಯೂ ಸೇರಿದಂತೆ ಇದುವರೆಗೂ ಒಟ್ಟು 11.72 ಕೋಟಿ ವೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಚಿನ್ನ ಕರಗಿಸಿದ?: ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಟ್, ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು, ಆರೋಪಿ ಮನ್ಸೂರ್ ಖಾನ್, ವಿದೇಶಕ್ಕೆ ಪರಾರಿ ಆಗುವ ಮೊದಲೇ 35 ಕೆಜಿ ಚಿನ್ನ ಕರಗಿಸಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಜೊತೆಗೆ, ಮಳಿಗೆಗಳಲ್ಲಿ ದೊರೆತಿರುವ ಆಸ್ತಿ ಪತ್ರಗಳು, ವಿವಿಧ ದಾಖಲೆ ಪತ್ರಗಳನ್ನು ಸಿ್ ವಶಕ್ಕೆ ಪಡೆದುಕೊಂಡಿದೆ.