‘ಶಾಸಕರು ರಾಜೀನಾಮೆ ಕೊಟ್ಟರೆ, ಮುಖ್ಯಮಂತ್ರಿ ಸಾಯುತ್ತಾರೆ’
ವಿವಾದಕ್ಕೆ ಎಡೆ ಮಾಡಿದ ಪ್ರಸನ್ನಾನಂದ ಸ್ವಾಮೀಜಿಯ ಹೇಳಿಕೆ
ಬೆಂಗಳೂರು, ಜೂ.25: ವಾಲ್ಮೀಕಿ ಜನಾಂಗದ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ಸಲ್ಲಿಸಿದರೆ, ಮುಖ್ಯಮಂತ್ರಿ ಸಾಯುತ್ತಾರೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯ ಹೇಳಿಕೆ ವಿವಾದಕ್ಕೆ ಎಡೆ ಮಾಡಿದೆ.
ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿದ ಅವರು, 17 ಮಂದಿ ವಾಲ್ಮೀಕಿ ಸಮುದಾಯದ ಶಾಸಕರು ಇದ್ದು, ಇವರು ಒಂದು ವೇಳೆ ಸಮುದಾಯದ ಬೇಡಿಕೆಗಳಿಗೆ ಆಗ್ರಹಿಸಿ ರಾಜೀನಾಮೆ ಸಲ್ಲಿಸಿದರೆ, ರಾಜ್ಯ ಸರಕಾರವೇ ಪತನವಾಗುತ್ತದೆ ಎಂದರು.
ಮುಖ್ಯಮಂತ್ರಿಗಳು ಸರಕಾರ ಉಳಿಸಲು ಕಾಲು ಹಿಡಿಯುತ್ತಾರೆ ಎನ್ನುವುದು ಗೊತ್ತಿದೆ. ಅವರು(ಎಚ್.ಡಿ.ಕುಮಾರಸ್ವಾಮಿ) ಮುಖ್ಯಮಂತ್ರಿ ಆಗಿ ಮುಂದುವರೆಯಬೇಕೇ ಅಥವಾ ಬೇಡವೇ ಎಂಬುವುದು ಇಂದೇ ತಿರ್ಮಾನವಾಗಲಿ ಎಂದು ಖಾರವಾಗಿಯೇ ಹೇಳಿದರು.
ಅವರಪ್ಪನೂ ಕೇಳಬೇಕು!
ನಾವು ಒಂದು ಬಾರಿ ಹೇಳಿದರೆ ಸಾಕು, ಮುಖ್ಯಮಂತ್ರಿಯೂ, ಅವರ ಅಪ್ಪನೂ ಸಹ ಕೇಳಲೇಬೇಕು ಎಂದು ಪ್ರತಿಭಟನೆ ನಿರತ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಏರು ಧ್ವನಿಯಲ್ಲಿಯೇ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.