ಯುವ ವೈದ್ಯರಿಗೆ ಗಿಡುಗನ ಕಣ್ಣು, ಸಿಂಹದ ಹೃದಯ ಅಗತ್ಯ: ಡಾ.ಸುಹಾಸ್ ಹಲ್ದಿಪುರ್ಕರ್
ಬೆಂಗಳೂರು, ಜೂ. 26: ಯುವ ವೈದ್ಯರು ಶಸ್ತ್ರ ಚಿಕಿತ್ಸೆ ತಜ್ಞರಾಗಿ ರೋಗಿಗಳ ಆರೋಗ್ಯಕ್ಕೆ ಆದ್ಯತೆ ನೀಡಿದರೆ ಮಾತ್ರ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯ. ಯಶಸ್ವಿ ಶಸ್ತ್ರಚಿಕಿತ್ಸಾ ತಜ್ಞರಾಗಲು ಯುವ ವೈದ್ಯರಿಗೆ ಗಿಡುಗದ ಕಣ್ಣು, ಸಿಂಹದ ಹೃದಯ ಮತ್ತು ಮಹಿಳೆಯ ಕೈಗಳಿರಬೇಕು ಎಂದು ಖ್ಯಾತ ಶಸ್ತ್ರಚಿಕಿತ್ಸಾ ತಜ್ಞ ಡಾ.ಸುಹಾಸ್ ಹಲ್ದಿಪುರ್ಕರ್ ಹೇಳಿದ್ದಾರೆ.
ಬುಧವಾರ ಬೆಂಗಳೂರು ಆಪ್ಥಾಲ್ಮಿಕ್ ಸೊಸೈಟಿ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನೇತ್ರಾ ಚಿಕಿತ್ಸಾ ತಜ್ಞರು ತಮ್ಮ ಮುಂದಿನ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕು. ಜೊತೆಗೆ ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಬಿಒಎಸ್ ಅಧ್ಯಕ್ಷ ಡಾ.ದಿವಾಕರ್, ಬದಲಾಗುತ್ತಿರುವ ಸಮಯದಲ್ಲಿ ತಂತ್ರಜ್ಞಾನವು ನೇತ್ರಚಿಕಿತ್ಸೆಯ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಆಯಾಮಗಳನ್ನು ಸರಳಗೊಳಿಸಿದೆ ಮತ್ತು ಇದು ಅಭೂತಪೂರ್ವ ರೀತಿಯಲ್ಲಿ ನೇತ್ರಚಿಕಿತ್ಸೆಯ ಸಾಮರ್ಥ್ಯವನ್ನು ಉತ್ತಮಪಡಿಸುತ್ತಿದೆ ಎಂದರು.
ಕಾರ್ಯದರ್ಶಿ ಡಾ.ಇಳಂಕುಮಾರನ್ ಮಾತನಾಡಿ, ರೋಗಿಯ ಸಂವಹನ ಮತ್ತು ದಾಖಲೀಕರಣ ಇಂದಿನ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ರೋಗಿಗಳೊಂದಿಗೆ ಉತ್ತಮ ಫಲಿತಾಂಶಕ್ಕೆ ಪಾರದರ್ಶಕತೆ ಕಾಪಾಡಿಕೊಳ್ಳಲು ಉತ್ತೇಜಿಸುತ್ತವೆ ಎಂದರು.