ಬೆಂಗಳೂರು: ಅಣ್ಣನ ಕೊಲೆಗೆ ಸುಪಾರಿ ಕೊಟ್ಟ ತಂಗಿ
ಬೆಂಗಳೂರು, ಜೂ.27: ಮದುವೆ ಕಾರಣಕ್ಕಾಗಿ ಸಹೋದರಿಯೇ ತನ್ನ ಅಣ್ಣನ ಕೊಲೆಗೆ ಹಣ ನೀಡಿರುವ(ಸುಪಾರಿ) ಪ್ರಕರಣವೊಂದನ್ನು ಇಲ್ಲಿನ ಕೆಂಗೇರಿ ಠಾಣಾ ಪೊಲೀಸರು ಭೇದಿಸಿ, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಲದೇವನಹಳ್ಳಿಯ ಗೌರಮ್ಮ್ಮ(45) ಎಂಬಾಕೆ ಸಹೋದರಿಯಾಗಿದ್ದು, ರಾಯಚೂರು ಜಿಲ್ಲೆಯ ಮಾನ್ವಿಯ ಮಮ್ತಾಜ್(28), ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುನ್ನ(22), ಪಶ್ಚಿಮ ಬಂಗಾಳದ ಅರ್ಜು(19), ಸಾಕೀಬ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ನಗರದ ವಿಶ್ವೇಶ್ವರಯ್ಯ ಲೇಔಟ್ನ ನಿರ್ಜನ ಪ್ರದೇಶದ ಮನೆಯೊಂದರಲ್ಲಿ ಜೂ.22 ರಂದು ರಾಜಶೇಖರಯ್ಯ ಎಂಬುವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಕೆಂಗೇರಿ ಪೊಲಿೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೊಲೆ ಪ್ರಕರಣ ಬೆನ್ನಟ್ಟಿದ ಪೊಲೀಸರು ರಾಜಶೇಖರಯ್ಯನ ಜೇಬಿನಲ್ಲಿದ್ದ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದಾರೆ. ಆಗ ಸಹೋದರಿ ಗೌರಮ್ಮನ ಮಗಳ ಮದುವೆ ಮಾಡಲು ಮುಂದಾಗಿರುವುದು ಪತ್ತೆಯಾಗಿದೆ. ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗೌರಮ್ಮ ಅವರಿಗೆ ತನ್ನ ಮಗಳ ಮದುವೆ ಮಾಡುವುದು ಇಷ್ಟವಿರಲಿಲ್ಲ. ಈ ಕುರಿತು ಅಣ್ಣ ರಾಜಶೇಖರಯ್ಯಗೆ ಎಷ್ಟು ಹೇಳಿದರೂ ಕೇಳಿರಲಿಲ್ಲ. ಕೊನೆಗೆ ಕೊಲೆಯಾದರೆ ಮದುವೆ ನಿಲ್ಲಿಸಬಹುದು ಎಂದು ತಿಳಿದುಕೊಂಡು ಮದುವೆಗೆ 2 ದಿನ ಬಾಕಿ ಇರುವಾಗಲೇ, 3 ಲಕ್ಷ ರೂ. ಸುಪಾರಿ ಕೊಟ್ಟು ರಾಜಶೇಖರಯ್ಯ ಅವರ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಾಗಿದೆ.