ಬರದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ವಿದೇಶಕ್ಕೆ ಹೋಗುವ ಅಗತ್ಯವೇನಿತ್ತು: ಆರ್.ಅಶೋಕ್ ಪ್ರಶ್ನೆ
ಬೆಂಗಳೂರು, ಜೂ.29: ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿದೇಶಕ್ಕೆ ಹೋಗುವ ಅಗತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ವಿದೇಶಕ್ಕೆ ಹೋಗುವ ನೆಪಕ್ಕಾಗಿಯೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ ಎಂದೆನಿಸುತ್ತದೆ. ರಾಜ್ಯದಲ್ಲಿಯೆ ಸಾಕಷ್ಟು ಸಮಸ್ಯೆ ಇರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದೇಶಕ್ಕೆ ಹೋಗಿರುವುದು ಸರಿಯಲ್ಲವೆಂದು ತಿಳಿಸಿದರು.
ಅಭಿವೃದ್ಧಿ ಮಾಡಲು ನಾವು ಬೇಕು. ಮತ ಹಾಕಲು ಬಿಜೆಪಿ ಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಹಾಸನಕ್ಕೆ ಕೇಂದ್ರ ಸಚಿವರಾಗಿದ್ದ ನಿತಿನ್ ಗಡ್ಕರಿಯವರು ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರೂ. ನೀಡಿದ್ದಾರೆ. ಹಾಗಾದರೆ ಆ ರಸ್ತೆಯಲ್ಲಿ ನೀವೇಕೆ ಓಡಾಡುತ್ತಿರಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಬೆಂಗಳೂರು ಮಹಾನಗರಕ್ಕೆ ಮೆಟ್ರೊ ರೈಲು ಜಾರಿ ಮಾಡಿದ್ದು ಅನಂತಕುಮಾರ್. ಹಾಗಾದರೆ ಆ ರೈಲಿನ ಉದ್ಘಾಟನೆಗೆ ಸಿದ್ದರಾಮಯ್ಯ ಯಾಕೆ ಹೋದರು ಎಂದು ಅವರು ಕಿಡಿಕಾರಿದರು.