ಎಫ್ಕೆಸಿಸಿಐ ಅಧ್ಯಕ್ಷನಾಗಿ ಕಂಡ ಕನಸು ಈಡೇರಿದೆ: ಸುಧಾಕರ್ ಶೆಟ್ಟಿ
ನೂತನ ಅಧ್ಯಕ್ಷ ಸಿ.ಆರ್.ಜನಾರ್ಧನ್ಗೆ ಅಧಿಕಾರ ಹಸ್ತಾಂತರ
ಸುಧಾಕರ್ ಶೆಟ್ಟಿ
ಬೆಂಗಳೂರು, ಜೂ.30: ಎಫ್ಕೆಸಿಸಿಐನ ಅಧ್ಯಕ್ಷನಾಗಿ ನನ್ನ ಗುರಿಗಳನ್ನು ಸಾಧಿಸುವ ಕನಸು ಕಂಡಿದ್ದೆ. ಅದು ಬಹುತೇಕ ಈಡೇರಿದ ತೃಪ್ತಿ ನನಗಿದೆ ಎಂದು ಎಫ್ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.
ಒಂದು ವರ್ಷದ ಅಧ್ಯಕ್ಷ ಅವಧಿ ಪೂರ್ಣಗೊಳಿಸಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಿ.ಆರ್.ಜನಾರ್ಧನ್ಗೆ ಅಧಿಕಾರ ವಹಿಸುವ ಮುನ್ನ ಮಾತನಾಡಿರುವ ಅವರು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರನ್ನು ಸೆಳೆದು, ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಆಹ್ವಾನಿಸಬೇಕು, ಇಲ್ಲೊಂದು ಆಸಿಯಾನ್ ಸಮ್ಮೇಳನ ಮಾಡಬೇಕು ಎಂದುಕೊಂಡಿದ್ದೆ. ಅದು ಈಡೇರಿದ ತೃಪ್ತಿಯಿದೆ ಎಂದು ಹೇಳಿದರು.
ಕೆಐಎಡಿಬಿ, ಕೆಎಸ್ಡಿಸಿ ನಿವೇಶನಗಳನ್ನು ಉನ್ನತೀಕರಿಸಬೇಕು, ಉತ್ತರ ಕರ್ನಾಟಕ ಭಾಗಕ್ಕೆ ಕೊಂಡೊಯ್ಯುವ ಆಶಯ ಈಡೇರಿಸಿಕೊಂಡಿದ್ದೇನೆ. ಸಚಿವ ಜಾರ್ಜ್ ಮತ್ತು ಸಿಎಂ ಕುಮಾರಸ್ವಾಮಿಯ ನೇರ ಸಂವಾದ ಮೂಲಕ ಏಳು ಜಿಲ್ಲೆಗಳಲ್ಲಿ ಕೈಗಾರಿಕೆಗಳು ನಿರ್ಮಾಣವಾಗುವ ಹಾಗೆ ಮಾಡುವಲ್ಲಿ ಸಫಲನಾಗಿದ್ದೇನೆ. ರಾಷ್ಟ್ರಮಟ್ಟದಲ್ಲಿ ಒಂದು ಎನ್ಆರ್ಐ ಫೋರಂ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇನ್ನು ಮಡಿಕೇರಿಯಲ್ಲಿ ಮನೆ ಕಳೆದುಕೊಂಡವರಿಗೆ ಸಹಾಯ ಹಸ್ತ ಚಾಚಿದ್ದು, ಗಡಿ ಕಾಯುವ ಸೈನಿಕರು ಹಾಗೂ ನಿಧನರಾದವರ ಕುಟುಂಬ ಸದಸ್ಯರಿಗೆ ಧನ ಸಹಾಯ ಮಾಡಿದ್ದೇವೆ ಎಂದು ಅವರು ನುಡಿದರು.