ಮನೆಯಲ್ಲಿಯೇ ಕಸ ಕಾಂಪೋಸ್ಟ್ ಮಾಡಿದರೆ ರಾಜಧಾನಿ ಕಸಮುಕ್ತ ನಗರವಾಗಲಿದೆ: ಬಿ.ಸುಭಾಷ್ ಆಡಿ
ಬೆಂಗಳೂರು, ಜು.1: ನಮ್ಮ ಕಸ ನಮ್ಮ ಜವಾಬ್ದಾರಿಯಾಗಿದ್ದು, ಕಸವನ್ನು ಮನೆಯಲ್ಲಿಯೇ ಕಾಂಪೋಸ್ಟ್ ಮಾಡಿದರೆ ರಾಜಧಾನಿಯನ್ನು ಕಸಮುಕ್ತ ನಗರವಾಗಿ ಪರಿವರ್ತಿಸಬಹುದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಕರ್ನಾಟಕ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಸುಭಾಷ್ ಆಡಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಪಶ್ಚಿಮ ವಲಯದ ಘನತ್ಯಾಜ್ಯ ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಕಸವನ್ನು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಬೇರ್ಪಡಿಸಬೇಕು. ವಾರ್ಡ್ನಲ್ಲಿ ಉತ್ಪತ್ತಿಯಾಗುವ ಕಸವನ್ನು ಅಲ್ಲಿಯೇ ಕಾಂಪೋಸ್ಟ್ ಮಾಡಿ ಅದೇ ವಾರ್ಡ್ನಲ್ಲಿ ಬಳಕೆ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಕಸಮುಕ್ತ ಬೆಂಗಳೂರು ನಿರ್ಮಾಣ ಸಾಧ್ಯ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಕಸದಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ 2016ರಲ್ಲಿ ಕೇಂದ್ರ ಸರಕಾರ ನಿಯಮಾವಳಿ ರೂಪಿಸಿದೆ. ಈ ನಿಯಮಗಳನ್ನು ಸ್ಥಳೀಯ ಸಂಸ್ಥೆ ಗಳು ಪಾಲನೆ ಮಾಡದ ಕಾರಣ 2018ರಲ್ಲಿ ಎನ್ಜಿಟಿ ಪ್ರತಿ ರಾಜ್ಯದಲ್ಲಿ ಸಮಿತಿ ರೂಪಿಸಿದ್ದು, ಸಾರ್ವಜನಿಕರಲ್ಲಿ ಕಸದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ, 2016 ರಲ್ಲಿ ಶೇ.53ರಷ್ಟು ಮನೆಗಳಲ್ಲಿ ಒಣ ಮತ್ತು ಹಸಿ ಕಸ ಬೇರ್ಪಡಿಸುತ್ತಿದ್ದರು. ಪ್ರಸ್ತುತ ಶೇ.30 ರಷ್ಟು ಜನರು ಮಾತ್ರ ಕಸ ಬೇರ್ಪಡಿಸುತ್ತಿದ್ದು, ಇದಕ್ಕೆ ಅಧಿಕಾರಿಗಳ ಅದಕ್ಷತೆ ಮತ್ತು ಜನಪ್ರತಿನಿಧಿಗಳೇ ಕಾರಣ. ಕಸ ವಿಲೇವಾರಿಯಲ್ಲಿ ಪಾರದರ್ಶಕತೆ ತರಲು ಹೊಸ ಟೆಂಡರ್ ಕರೆಯಲಾಗುವುದು. ಮಾಂಸ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಟೆಂಡರ್ ಕರೆಯಲಾಗುವುದು ಎಂದರು.
ಬೆಂಗಳೂರು ಪಶ್ಚಿಮ ವಲಯದಲ್ಲಿ ಪ್ರತಿನಿತ್ಯ 295 ಮೆ.ಟನ್ ಹಸಿ ಕಸ ಉತ್ಪತ್ತಿಯಾಗುತ್ತಿದ್ದು, ಕನ್ನಹಳ್ಳಿ, ಎಂಎಸ್ಜಿಪಿ, ದೊಡ್ಡಬಿದರಕಲ್ಲು ಸಂಸ್ಕರಣಾ ಘಟಕಗಳಿಗೆ ಸಾಗಣೆ ಮಾಡಲಾಗುತ್ತಿದೆ. 63 ಮೆ. ಟನ್ ಒಣಕಸ ಬಿಬಿಎಂಪಿ ವ್ಯಾಪ್ತಿಯ ಒಣಕಸ ಸಂಗ್ರಹಣಾ ಘಟಕಗಳಿಗೆ ನೀಡಲಾಗುತ್ತಿದೆ. ಮಿಶ್ರ ಕಸ ಬೆಳ್ಳಳ್ಳಿ ಭೂ ಭರ್ತಿ ಘಟಕಕ್ಕೆ ಸಾಗಣೆಯಾಗುತ್ತಿದೆ. ಈ ವ್ಯಾಪ್ತಿಯಲ್ಲಿ 125 ಕಾಂಪ್ಯಾಕ್ಟರ್, 20ಟಿಪ್ಪರ್, 871 ಆಟೋ ಟಿಪ್ಪರ್ ಕೆಲಸ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಶಾಸಕ ವಿ.ಸೋಮಣ್ಣ ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎಮ್ಮೆ ಚರ್ಮದ ಅಧಿಕಾರಿಗಳಿದ್ದು, ಬಿಬಿಎಂಪಿ, ಬಿಡಿಎ ಭ್ರಷ್ಟಾಚಾರದಲ್ಲಿ ಮುಳುಗಿವೆ. ಕೆಲವೇ ಗುತ್ತಿಗೆದಾರರ ಕೈಯಲ್ಲಿ ನಗರವಿದ್ದು, ಈ ವ್ಯವಸ್ಥೆ ಮತ್ತು ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಬೇಕಿದೆ. ಬಿಬಿಎಂಪಿ ಕಸ ವಿಲೇವಾರಿಗೆ 1100 ಕೋಟಿ ರೂ. ಗೂ ಅಧಿಕ ಹಣ ಖರ್ಚು ಮಾಡಿದರೂ, ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂದು ಆರೋಪಿಸಿದರು.
ಪ್ರಸ್ತುತ ಬಿಬಿಎಂಪಿ ಮೇಯರ್ ಅವಧಿ 1 ವರ್ಷವಿದ್ದು, ಈ ಅವಧಿಯಲ್ಲಿ ಮೇಯರ್ ಅಭಿವೃದ್ಧಿ ಕಾರ್ಯಕೈಗೊಳ್ಳುವುದು ಕಷ್ಟವಾಗುತ್ತಿದೆ. ಆದ್ದರಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ 30 ತಿಂಗಳು ಮೇಯರ್ ಅವಧಿ ನಿಗದಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಭದ್ರೇಗೌಡ, ವಿಧಾನ ಪರಿಷತ್ ಸದಸ್ಯ ದೇವೇಗೌಡ, ಮಾಜಿ ಮೇಯರ್ ಪದ್ಮಾವತಿ, ಪಾಲಿಕೆ ಸದಸ್ಯ ಸತ್ಯನಾರಾಯಣ, ಆನಂದ, ವಿಶೇಷ ಆಯುಕ್ತ ರಂದೀಪ್ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶದಲ್ಲಿ ಪ್ರತಿದಿನ 1.40 ಲಕ್ಷ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ರಾಜ್ಯದಲ್ಲಿ 11 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಬೆಂಗಳೂರಿನಲ್ಲಿಯೇ 5,600 ಟನ್ ಕಸ ಉತ್ಪತ್ತಿಯಾಗುತ್ತಿದೆ.
-ಬಿ.ಸುಭಾಷ್ ಆಡಿ, ಎನ್ಜಿಟಿ ಕರ್ನಾಟಕ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ
ಕಸಕ್ಕೆ ಹಣ
ಪ್ರತಿ ವಾರ್ಡ್ನಲ್ಲಿಯೂ ಕಸ ಸಂಗ್ರಹ ಕೇಂದ್ರ ಸ್ಥಾಪಿಸಿ. ಒಣ ಕಸಕ್ಕೆ ತೂಕದ ಮೂಲಕ ಹಣ ನೀಡಿದರೆ ಕಸ ನಿರ್ವಹಣೆ ಸಾಧ್ಯ.
-ಗೌಡಯ್ಯ, ಜ್ಞಾನಭಾರತಿ ವಾಯು ವಿಹಾರ ಅಸೋಸಿಯೇಷನ್ನ ಸದಸ್ಯ
ಸಭೆಯ ನಿರ್ಣಯಗಳು
* ಎಲ್ಲೆಂದರಲ್ಲಿ ಕಸ ಎಸೆದರೆ ದಂಡ.
* ಸಿಸಿ ಕ್ಯಾಮೆರಾ ಕಣ್ಗಾವಲು.
* ಮರುಬಳಕೆಗಾಗಿ ತ್ಯಾಜ್ಯ ವಿಂಗಡನೆ.
* ಹಾನಿಕಾರಕ ತ್ಯಾಜ್ಯ ವಿಂಗಡನೆ.
* ಕಸವನ್ನು ಮನೆಯಲ್ಲಿಯೇ ಕಾಂಪೋಸ್ಟ್ ಮಾಡಬೇಕು.
* ವಾರ್ಡ್ ಕಸ ವಾರ್ಡ್ನಲ್ಲೇ ಕಾಂಪೋಸ್ಟ್ ಮಾಡಬೇಕು.