ನಗೆಪಾಟಲಿಗೀಡಾದ ನಿತ್ಯಾನಂದ ಸ್ವಾಮಿಯ 'ಸೂರ್ಯೋದಯ'
ಬೆಂಗಳೂರು, ಜು.4 : ನಾನು ಧ್ವಜಾರೋಹಣ ಮುಗಿಸುವವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಸೂರ್ಯ ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ ಎಂದು ನಿತ್ಯಾನಂದ ಸ್ವಾಮೀಜಿ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ನಗೆಪಾಟಲಿಗೆ ಗುರಿಯಾಗಿದೆ.
ಬಿಡದಿ ಆಶ್ರಮದಲ್ಲಿ ವಿದೇಶಿ ಭಕ್ತಾದಿಗಳನ್ನು ಸುತ್ತಲು ಕೂರಿಸಿಕೊಂಡು ನಾನು ಆದೇಶ ನೀಡಿದ್ದಕ್ಕೆ ಸೂರ್ಯ ತಡವಾಗಿ ಉದಯಿಸಿದ. ದಿನ ಆರಂಭವಾಗುವುದು ಸೂರ್ಯೋದಯದ ಮೂಲಕ. ಇವತ್ತು ಎಷ್ಟು ಮಂದಿ ಸೂರ್ಯೋದಯವನ್ನು ನೋಡಿದ್ದೀರೋ ಗೊತ್ತಿಲ್ಲ. ಇವತ್ತು ನಾನು ಧ್ವಜಾರೋಹಣಕ್ಕೆ ತಡವಾಗಿ ಬಂದೆ. ಪ್ರತಿದಿನ ಮುಂಜಾನೆ 6:40ರಿಂದ 7 ರವರೆಗೆ ಧ್ವಜಾರೋಹಣ ನಡೆಯುತ್ತದೆ. ಆದರೆ ನಾನು ಇಂದು ಕೊಂಚ ತಡವಾಗಿ ಬಂದೆ. ನಾನು ಹೇಳೋವರೆಗೆ, ಧ್ವಜಾರೋಹಣ ಮುಗಿಸೋವರೆಗೆ ನೀನು ಕಾಣಿಸಿಕೊಳ್ಳಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಸೂರ್ಯ ಅವತ್ತು ಬಿಡದಿಯಲ್ಲಿ ನಲವತ್ತು ನಿಮಿಷ ತಡವಾಗಿ ಕಾಣಿಸಿಕೊಂಡ ಎಂದಿದ್ದಾರೆ.
ಬಿಡದಿಯಲ್ಲಿ ಮಾತ್ರ ಈ ಅಚ್ಚರಿ ನಡೆದಿದ್ದು, ಬೇಕಾದರೆ ಗೂಗಲ್ ನಲ್ಲಿ ಇಂದಿನ ಸೂರ್ಯೋದಯದ ಸಮಯ ಎಷ್ಟಿತ್ತು? ಬಿಡದಿಯಲ್ಲಿ ಸೂರ್ಯೋದಯವಾದ ಸಮಯ ನೋಡಿ ಆಗ ಗೊತ್ತಾಗುತ್ತೆ. ಇದೆಲ್ಲ ನನ್ನಿಂದ ಮಾತ್ರ ಸಾಧ್ಯ ಎಂದು ವಿವರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ನಿತ್ಯಾನಂದ ಸ್ವಾಮೀಜಿ ನಗೆಪಾಟಲಿಗೆ ಗುರಿಯಾಗಿ, ಸಾಕಷ್ಟು ಸುದ್ದಿ ಮಾಡಿದ್ದಾರೆ.