ಮಾಲಕನಿಗೆ 2.9 ಕೋಟಿ ರೂ. ವಂಚಿಸಿ ಪರಾರಿ
ಬೆಂಗಳೂರು, ಜು.5: ಗುತ್ತಿಗೆದಾರನಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಮಾಲಕನಿಗೆ ಬರೋಬ್ಬರಿ 2.9 ಕೋಟಿ ರೂ. ವಂಚಿಸಿ, ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುರೇಶ್ ಎಂಬುವರು ಮಾಲಕನಾಗಿದ್ದು, ಇವರ ಜೊತೆ 10 ವರ್ಷದಿಂದ ಗುತ್ತಿಗೆದಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಶಿವರಾಮ್ ಎಂಬಾತ, ಹಣ ವಂಚಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಲಕನಿಗೆ ತಿಳಿಯದ ರೀತಿಯಲ್ಲಿ ಆರೋಪಿ ಶಿವರಾಮ್, ಕಳೆದ ಒಂದು ವರ್ಷದಿಂದ ಹಣ ವಂಚನೆ ಮಾಡಿದ್ದಾನೆ. ಇತ್ತೀಚಿಗೆ ಕೆಲಸದ ವೆಚ್ಚ ಕುರಿತು ಲೆಕ್ಕ ಪರಿಶೀಲನೆ ನಡೆಸಿದಾಗ, ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ, ಹಣ ವಾಪಸ್ಸು ನೀಡುವಂತೆ ಮಾಲಕರು ಸೂಚಿಸಿದರೂ, ಈತ ಮಾಲಕನ ವಿರುದ್ಧವೇ ತೆರಿಗೆ ಇಲಾಖೆಗೆ ದೂರು ನೀಡಿ, ಅನಧಿಕೃತವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಹೇಳಿದ್ದ. ಬಳಿಕ, ಐಟಿ ಅಧಿಕಾರಿಗಳು, ಪರಿಶೀಲನೆ ನಡೆಸಿ, ಮಾಲಕ ಸುರೇಶ್ ಅವರಿಗೆ ಕ್ಲೀನ್ಚೀಟ್ ನೀಡಿದ್ದರು.
ಇದೀಗ, ಶಿವರಾಮ್ ವಿರುದ್ಧ ದೂರು ನೀಡಿದ್ದು, ತನಿಖೆ ಕೈಗೊಂಡು, ಆರೋಪಿಯನ್ನು ಬಂಧಿಸುವಂತೆ ಮಾಲಕ ಸುರೇಶ್ ಮನವಿ ಮಾಡಿದ್ದಾರೆ.