ಜನರ ವಿಶ್ವಾಸಕ್ಕೆ ದ್ರೋಹ: ತನ್ವೀರ್ ಸೇಠ್
ಶಾಸಕರ ರಾಜೀನಾಮೆ
ಬೆಂಗಳೂರು, ಜು.13: ರಾಜೀನಾಮೆ ಸಲ್ಲಿಸಿರುವ ಶಾಸಕರು ಜನರ ವಿಶ್ವಾಸಕ್ಕೆ ದ್ರೋಹ ಮಾಡಿದ್ದು, ಎಲ್ಲವೂ ಸರಿ ಹೋಗುತ್ತೆ ಎನ್ನುವ ಭರವಸೆ ಇದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದರು.
ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಲ್ಲಿಸಿರುವ ಶಾಸಕರ ಉದ್ದೇಶ ಏನು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದ್ದರಿಂದ, ಅವರ ಮೇಲೆ ಪಕ್ಷ ವಿರೋಧ ಚಟುವಟಿಕೆ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ನಂಬಿಕೆ ಇಲ್ಲ ಎನ್ನುವ ಕಾರಣಕ್ಕೆ ನಮ್ಮನ್ನು ಖಾಸಗಿ ಹೊಟೇಲ್ಗೆ ಕರೆದುಕೊಂಡು ಬಂದಿಲ್ಲ. ವಿಶ್ವಾಸ ಮತಯಾಚನೆ ವೇಳೆ ಈ ರೀತಿ ಎಲ್ಲ ಶಾಸಕರನ್ನು ಒಟ್ಟಿಗೆ ಸೇರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
ನಮ್ಮ ಪಕ್ಷದ ಶಾಸಕರನ್ನು ಮನವೊಲಿಸೋ ಪ್ರಯತ್ನ ನಾವೇ ಮಾಡಬೇಕು. ನಮ್ಮ ನಾಯಕರು ಆ ಕೆಲಸಕ್ಕೆ ಮುಂದಾಗಿದ್ದಾರೆ. ಜು.16ರಂದು ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಬಹುದು ಎಂದು ಮಾಹಿತಿ ನೀಡಿದರು.
Next Story