ಆರೋಪ-ಪ್ರತ್ಯಾರೋಪಗಳಿಗೆ ಮೀಸಲಾದ ಪರಿಷತ್ ಕಲಾಪ
ಬೆಂಗಳೂರು, ಜು.15: ಬಹುಮತವಿಲ್ಲದ ಮೈತ್ರಿ ಸರಕಾರ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸದಸ್ಯರು ಧರಣಿ ನಡೆಸಿದರೆ, ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಮೈತ್ರಿ ಪಕ್ಷದ ಸದಸ್ಯರು ಆರೋಪಿಸಿದರು. ಹೀಗೆ ಆರೋಪ, ಪ್ರತ್ಯಾರೋಪಗಳು, ಗದ್ದಲ, ಕೋಲಾಹಲಗಳ ನಡುವೆ ವಿಧಾನಪರಿಷತ್ ಕಲಾಪವನ್ನು ಮುಂದೂಡಲಾಯಿತು.
ಸೋಮವಾರ ವಿಧಾನಪರಿಷತ್ ಕಲಾಪ ಪ್ರಾರಂಭವಾದಾಗ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡಾಗ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ಸದಸ್ಯರು, ಕೆಳ ಮನೆಯಲ್ಲಿ ಆಡಳಿತ ಪಕ್ಷದ 16 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಸರಕಾರ ಅಲ್ಪಮತಕ್ಕೆ ಕುಸಿದಿದೆ. ಇದಲ್ಲದೆ, ಎಲ್ಲಾ ಸಚಿವರೂ ಕೂಡ ರಾಜೀನಾಮೆ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪ ನಡೆಸುವ ನೈತಿಕತೆ ಇಲ್ಲ. ಸರಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕಿ ಜಯಮಾಲಾ, ಸಚಿವರಾದ ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ, ಬಂಡೆಪ್ಪ ಕಾಶಂಪುರ್, ನಾವು ರಾಜೀನಾಮೆ ನಿಮಗೆ ನೀಡಿದ್ದೇವೆಯೇ. ನಮ್ಮ ರಾಜೀನಾಮೆ ಅಂಗೀಕಾರವಾಗಿದೆಯೇ. ನಿಮಗೆ ನೈತಿಕತೆ ಇದೆಯೇ. ನಮ್ಮ ಶಾಸಕರನ್ನು ಕೊಂಡೊಯ್ದು ಮುಂಬೈನಲ್ಲಿಟ್ಟುಕೊಂಡಿದ್ದೀರ ಎಂದು ತಿರುಗೇಟು ನೀಡಿದರು.
ಆಗಲೂ ಸುಮ್ಮನಿರದ ಪ್ರತಿಪಕ್ಷದ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಿತ್ತಿಪತ್ರಗಳನ್ನು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಅಲ್ಪಮತಕ್ಕೆ ಕುಸಿದಿರುವ ಸರಕಾರ ರಾಜೀನಾಮೆ ನೀಡಬೇಕು. ಬಹುಮತ ಕಳೆದುಕೊಂಡಿರುವ ಸರಕಾರ ಅಧಿಕಾರದಿಂದ ಹೋಗಬೇಕು ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.
ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಭಿತ್ತಿಪತ್ರ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಶಾಸಕರ ಖರೀದಿ ಮಾಡಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಐವಾನ್ ಡಿಸೋಜಾ, ಟಿ.ಎ.ಶರವಣ ಮುಂತಾದವರು 100 ಕೋಟಿ, 50 ಕೋಟಿಗೆ ಶಾಸಕರನ್ನು ಖರೀದಿ ಮಾಡಲಾಗಿದೆ ಎಂದು ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಲಾರಂಭಿಸಿದರು. ಕಲಾಪದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸದನವನ್ನು ಅರ್ಧಗಂಟೆ ಮುಂದೂಡಲಾಯಿತು.
ಎರಡನೇ ಬಾರಿ ಮೇಲ್ಮನೆ ಕಲಾಪ ಪ್ರಾರಂಭವಾದಾಗ ಆಡಳಿತ ಪಕ್ಷದ ಸದಸ್ಯ ಐವಾನ್ ಡಿಸೋಜಾ ಪ್ರಶ್ನೋತ್ತರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದಾಗ, ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸರಕಾರ ಬಹುಮತ ಕಳೆದುಕೊಂಡಿದೆ. ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪುನಃ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ಉಂಟಾಯಿತು. ಮಧ್ಯಪ್ರವೇಶಿಸಿದ ಎಸ್.ಎಲ್.ಧರ್ಮೇಗೌಡ ಕಲಾಪವನ್ನು ನಾಳೆ 11.30ಕ್ಕೆ ಮುಂದೂಡಿದರು.