ಐಎಂಎ ವಂಚನೆ ಪ್ರಕರಣ: ಉಪವಿಭಾಗಾಧಿಕಾರಿ ನಾಗರಾಜ್ಗೆ ಆರು ದಿನಗಳ ನ್ಯಾಯಾಂಗ ಬಂಧನ
ಎಲ್.ಸಿ.ನಾಗರಾಜ್
ಬೆಂಗಳೂರು, ಜು.15: ಐಎಂಎ(ಐ ಮಾನಿಟರಿ ಅಡ್ವೈಸರಿ) ಸಂಸ್ಥೆಯ ಪ್ರಕರಣದಲ್ಲಿ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ಗೆ ಸಹಾಯ ಮಾಡಿ ಲಂಚದ ಹಣ ಸ್ವೀಕರಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ಗೆ ನ್ಯಾಯಾಲಯ ಆರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ಜು.14ರವರೆಗೆ ಎಸ್ಐಟಿ ವಶದಲ್ಲಿದ್ದ ನಾಗರಾಜ್ ವಿಚಾರಣೆಗಾಗಿ ಎರಡು ದಿನ ಸಾಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಮನ್ಸೂರ್ ಖಾನ್ ಬಗ್ಗೆ ಮಾಹಿತಿ ಪಡೆಯಲು ನಾಗರಾಜ್ ತಮ್ಮ ವಶಕ್ಕೆ ಬೇಕು ಎಂದು ಎಸ್ಐಟಿ ತಂಡ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿತು. ಹೀಗಾಗಿ, ನಗರದ ಸಿವಿಲ್ ನ್ಯಾಯಾಲಯ ಆರು ದಿನಗಳ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶ ಹೊರಡಿಸಿದೆ.
ಈ ಹಿಂದೆ ಸರಕಾರ ಐಎಂಎ ಸಂಸ್ಥೆಯ ಬಗ್ಗೆ ವಿಚಾರಣೆಗೆ ಎಂದು ಉಪ ವಿಭಾಗಾಧಿಕಾರಿ ನಾಗರಾಜ್ ಅವರನ್ನು ನೇಮಿಸಿತ್ತು. ರಾಜ್ಯ ಸರಕಾರ ಸಕ್ಷಮ ಪ್ರಾಧಿಕಾರಿಯನ್ನಾಗಿ ಎಸಿ ನಾಗರಾಜ್ ಅವರನ್ನು ನೇಮಿಸಿತ್ತು. ನೈಜ ಸಂಗತಿಯನ್ನು ಮರೆಮಾಜಿ, ಐಎಂಎ ಪ್ರಮುಖ ಆರೋಪಿ ಮನ್ಸೂರ್ ಖಾನ್ಗೆ ಅನುಕೂಲವಾಗುವಂತೆ ಸುಳ್ಳು ವರದಿ ಸಲ್ಲಿಸಿದ್ದರು ಎನ್ನಲಾಗಿದೆ.