ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಛೀ, ಥೂ...ಚಳವಳಿ
ಭಾವಚಿತ್ರಕ್ಕೆ ಕ್ಯಾಕರಿಸಿ ಉಗಿದು ಆಕ್ರೋಶ ವ್ಯಕ್ತಪಡಿಸಿದ ರೈತರು
ಬೆಂಗಳೂರು, ಜು.15: ರಾಜ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಅಣಕಿಸುವ, ಬೇಜವಾಬ್ದಾರಿಯಿಂದ ರಾಜೀನಾಮೆ ನೀಡುತ್ತಿರುವ ಮಾನಗೇಡಿ ಶಾಸಕರುಗಳಿಗೆ, ಛೀ, ಥೂ... ಎಂದು ಉಗಿಯುವ ಚಳವಳಿಯನ್ನು ರೈತ ಸಂಘದ ಕಾರ್ಯಕರ್ತರು ಸೋಮವಾರ ಮೌರ್ಯ ಹೊಟೇಲ್ನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿ ತೀರ್ಮಾನದ ಮೇರೆಗೆ, ರಾಜ್ಯ ರಾಜಕಾರಣದಲ್ಲಿ ಸ್ವಾರ್ಥಕ್ಕಾಗಿ, ಬೇಜವಾಬ್ದಾರಿಯಿಂದ ರಾಜೀನಾಮೆ ನೀಡುತ್ತಿರುವ ಮಾನಗೇಡಿ ಶಾಸಕರುಗಳಿಗೆ, ಅವರನ್ನು ಪ್ರೇರೇಪಿಸುತ್ತಿರುವ ರಾಜಕೀಯ ಪಕ್ಷಗಳನ್ನು ಹಾಗೂ ಐಎಂಎ ಕಂಪನಿ ವಂಚನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ವಿರೋಧಿಸಿ ಛಿ, ಥೂ.. ಎಂದು ಉಗಿಯುವ ಚಳವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಅದೇ ರೀತಿ, ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಪ್ರತಿಕೃತಿಗೆ ಕ್ಯಾಕರಿಸಿ ಉಗಿಯುವ ವಿನೂತನ ಚಳುವಳಿ ನಡೆಸಲಾಯಿತು. ಅಲ್ಲದೇ, ದಾವಣಗೆರೆ, ತುಮಕೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಇದೇ ರೀತಿ ಪ್ರತಿಭಟಿಸಿ ಶಾಸಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು.