ಗಾರ್ಮೆಂಟ್ಸ್ ಕಾರ್ಮಿಕರ ಮೇಲಿನ ಕೇಸು ವಾಪಸ್: ಸಿಎಂ
ಬೆಂಗಳೂರು, ಮೇ 1: ಸಿದ್ಧಉಡುಪು ಕಾರ್ಖಾನೆ ಕಾರ್ಮಿಕರ ಮೇಲೆ ಹೊರಿಸಿರುವ ಕೇಸುಗಳನ್ನು ಹಿಂಪಡೆಯುವ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಮಾಯಕರ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪರಿಶೀಲಾಗುವುದು ಎಂದು ಹೇಳಿದರು.
ಕೇಂದ್ರ ಸರಕಾರ ಕಾರ್ಮಿಕರೊಂದಿಗೆ ಕನಿಷ್ಠ ಚರ್ಚೆಯನ್ನೂ ನಡೆಸದೆ ನೂತನ ಭವಿಷ್ಯನಿಧಿ ನೀತಿ(ಪಿಎಫ್)ಯನ್ನು ಜಾರಿಗೆ ತರುವ ಮೂಲಕ ಅತ್ಯಂತ ತಪ್ಪು ನಿರ್ಧಾರ ಕೈಗೊಂಡಿತ್ತು. ರಾಜ್ಯದಲ್ಲಿ ಏಕಾಏಕಿ ಪ್ರತಿಭಟನೆ ನಡೆಸಿದ್ದು ಅನಿರೀಕ್ಷಿತ ಎಂದು ಸಿದ್ಧರಾಮಯ್ಯ ತಿಳಿಸಿದರು.
ರಾಜ್ಯದಲ್ಲಿನ ಎಲ್ಲ ಕಾರ್ಮಿಕರು ಶಾಂತಿಪ್ರಿಯರು. ಕಾರ್ಮಿಕರೇ ದೇಶದ ನಿಜವಾದ ಸಂಪತ್ತು. ಪಿಎಫ್ ನೀತಿ ವಿರೋಧಿಸಿ ಐತಿಹಾಸಿಕ ಪ್ರತಿಭಟನೆ ನಡೆಸಿದ ಮಹಿಳೆಯರು ಸೇರಿದಂತೆ ಎಲ್ಲ ಕಾರ್ಮಿಕರಿಗೆ ಅಭಿನಂದನೆ ಎಂದು ಶ್ಲಾಘಿಸಿದ ಸಿದ್ದರಾಮಯ್ಯ, ಕಾರ್ಮಿಕರ ಹಿತರಕ್ಷಣೆಗೆ ರಾಜ್ಯ ಸರಕಾರ ಬದ್ಧ ಎಂದು ಘೋಷಿಸಿದರು.