ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಸಿದ್ಧರಾಮಯ್ಯ
ಬೆಂಗಳೂರು, ಜು.18: ವಿಶ್ವಾಸದ ಮತದ ಪ್ರಸ್ತಾವದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.
‘‘1967ರಲ್ಲಿ ಹರ್ಯಾಣದಲ್ಲಿ ಗಯಾಲಾಲ್ ಒಂದೇ ದಿನ ಅವರು ಮೂರು ಬಾರಿ ಪಕ್ಷಾಂತರ ಮಾಡುತ್ತಾರೆ. ಆಗ ಪಕ್ಷಾಂತರ ಕಡಿವಾಣ ಹಾಕಲು ಗಂಭೀರ ಚರ್ಚೆ ಆರಂಭವಾಗುತ್ತದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯ್ದೆ ತಂದ ಕೀರ್ತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. ನಿಷೇಧ ಕಾಯ್ದೆಯನ್ನು ಎಲ್ಲ ಪಕ್ಷಗಳ ಸ್ವಾಗತಿಸಿದ್ದವು’’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘‘ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿರುವುದು ಒಂದು ಕುಟಿಲ ತಂತ್ರ. ಶಾಸಕನೊಬ್ಬನಿಗೆ ಆತನ ಪಕ್ಷ ವಿಪ್ ನೀಡಲು ಅವಕಾಶವಿದೆ. ಆದರೆ, ವಿಪ್ ಕೊಟ್ಟರೂ, ಅದನ್ನು ಉಲ್ಲಂಘಿಸಿ ಕೆಲವು ಸದಸ್ಯರು ಗುಂಪಾಗಿ ಹೋಗಿದ್ದಾರೆ. ಗುಂಪಾಗಿ ಬಂದು ರಾಜೀನಾಮೆ ಕೊಟ್ಟಿದ್ದಾರೆ. ನಮ್ಮ 15 ಶಾಸಕರು ಸದನಕ್ಕೆ ಬಾರದಿರಲು ಬಿಜೆಪಿಯ ನೇರ ಕಾರಣ’’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನನ್ನ ಸರಕಾರ ಲೂಟಿ ಸರಕಾರವಲ್ಲ: ಕುಮಾರಸ್ವಾಮಿ
‘‘ನಾವು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎನ್ನುವ ಭಿನ್ನಮತೀಯರ ಶಾಸಕರು ಕೋರ್ಟ್ನಲ್ಲಿ ಹೋಗಿ ಬೇರೆಯದ್ದೇ ಮಾತನಾಡಿದ್ದಾರೆ. ನನ್ನ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದಾರೆ. ಇಲ್ಲಿ ಕೆಲವರಿಗೆ ಮಾನ ಮರ್ಯಾದೆ ಇದೆಯೋ, ಇಲ್ಲವೋ ಗೊತ್ತಿಲ್ಲ. ನಾನು ಇನ್ನೂ ಮರ್ಯಾದೆ ಇಟ್ಟುಕೊಂಡು ಬದುಕಿದ್ದೇನೆ. 14 ತಿಂಗಳ ರಾಜಕೀಯ ಅಸ್ಥಿರಕ್ಕೆ ಯಾರು ಕಾರಣ, ಏನೇನು ನಡೆದಿದೆ ಎಂಬುದರ ಅರಿವು ನನಗಿದೆ. ನನ್ನ ಸರಕಾರ ಲೂಟಿ ಸರಕಾರವಲ್ಲ. ಬರಗಾಲ, ಕೊಡಗಿನ ನೆರೆಯಂಥ ಸಂದರ್ಭಗಳನ್ನು ಸರಕಾರ ಸಮರ್ಥವಾಗಿ ನಿಭಾಯಿಸಿದೆ’’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿಶ್ವಾಸ ಮತ ಪ್ರಸ್ತಾವನೆ ಮಂಡಿಸಲು ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಸ್ಪೀಕರ್ ಸೂಚನೆ ನೀಡಿದರು.ಆದಷ್ಟು ಬೇಗನೆ ಪ್ರಕ್ರಿಯೆ ಮುಗಿಸಲು ಸ್ಪೀಕರ್ಗೆ ಯಡಿಯೂರಪ್ಪ ಒತ್ತಾಯಿಸಿದಾಗ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಭಾರೀ ಅವಸರದಲಿದ್ದಾರೆ ಎಂದು ಎಚ್ಡಿಕೆ ಕಾಲು ಎಳೆದರು.