ನಾವು ಮತ್ತೆ ರಾಜ್ಯಪಾಲರ ಬಳಿ ಹೋಗಲ್ಲ: ಬಿಎಸ್ವೈ
"ಸ್ಪೀಕರ್ ವಿನಾಕಾರಣ ಸಮಯ ವ್ಯರ್ಥ ಮಾಡಿದ್ದಾರೆ"
ಬೆಂಗಳೂರು, ಜು.19: ನಾವು ಮತ್ತೆ ರಾಜ್ಯಪಾಲರ ಬಳಿ ಹೋಗಲ್ಲ ಎಂದು ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಸರಕಾರಕ್ಕೆ ಬಹುಮತ ಇಲ್ಲ ಎಂದು ಗೊತ್ತಾದ ಮೇಲೆ ರಾಜ್ಯಪಾಲರು ಮೂರು ಬಾರಿ ಪತ್ರ ಬರೆದು ಬಹುಮತ ಸಾಬೀತಿಗೆ ಕೇಳಿದ್ದಾರೆ. ಆದರೆ ಸ್ಪೀಕರ್ ವಿನಾಕಾರಣ ಸಮಯ ವ್ಯರ್ಥ ಮಾಡಿದ್ದಾರೆ. ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಸೋಮವಾರ ಈ ಬಗ್ಗೆ ಮಂಗಳ ಹಾಡುವುದಾಗಿ ಹೇಳಿದ್ದಾರೆ. ಬಹುಮತ ಇಲ್ಲದೇ ಇದ್ದರೂ ಬೇರೆಯವರಿಗೆ ಬಹುಮತ ಸಾಬೀತುಪಡಿಸಲು ಬಿಡುತ್ತಿಲ್ಲ ಎಂದು ಅವರು ಹೇಳಿದರು.
ದೇಶಕ್ಕೆ ಸುದ್ದಿ ತಿಳಿಯಲಿ ಎಂದು ಅಹೋರಾತ್ರಿ ಧರಣಿ ನಡೆಸಿದೆವು ಎಂದ ಅವರು, ಅತೃಪ್ತರು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸೋಮವಾರ ನಡೆ ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ. ರಾಜ್ಯಪಾಲರಿಗೆ ಏನು ರಿಪೋರ್ಟ್ ಮಾಡಬೇಕು ಅದನ್ನು ಕೇಂದ್ರಕ್ಕೆ ಮಾಡಿದ್ದಾರೆ. ಮುಂದಿನ ನಿರ್ಧಾರ ರಾಜ್ಯಪಾಲರಿಗೆ ಬಿಟ್ಟದ್ದು. ನಾವು ಸೋಮವಾರದವರೆಗೂ ಕಾದು ನೋಡುತ್ತೇವೆ ಎಂದು ಹೇಳಿದರು.