ದೃಷ್ಟಿ ಸಮಸ್ಯೆಗೆ ವೈದ್ಯರು, ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಲ್ಲ: ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ
ಮಿಂಟೊ ಆಸ್ಪತ್ರೆ ಪ್ರಕರಣ
ಮಿಂಟೊ ಆಸ್ಪತ್ರೆ
ಬೆಂಗಳೂರು, ಜು.21: ಮಿಂಟೊ ಆಸ್ಪತ್ರೆಯಲ್ಲಿ ರೋಗಿಗಳಲ್ಲಿ ಉಂಟಾಗಿರುವ ದೃಷ್ಟಿ ಸಮಸ್ಯೆಗೆ ಔಷಧದ ಅಡ್ಡಪರಿಣಾಮ ಕಾರಣ ಎಂಬ ಪ್ರಯೋಗಾಲಯದ ವರದಿ ಆಧರಿಸಿ ಔಷಧಿ ತಯಾರಿಕಾ ಕಂಪನಿ ಆಪ್ಟೆಕ್ನಿಕ್ ಮತ್ತು ವಿತರಕರಾದ ಯೂನಿಕಾರ್ನ್ ಡಿಸ್ಟ್ರಿಬ್ಯೂಟರ್ಸ್ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ ವತಿಯಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಸರಕಾರದಿಂದ ರಚನೆಗೊಂಡ ಸಮಿತಿಯ ಸದಸ್ಯರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಮಿತಿಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚಿನ ಚಿಕಿತ್ಸೆಗೆ ಕ್ರಮ: ಆಸ್ಪತ್ರೆಯಲ್ಲಿ ಈಗ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಏಳು ಮಂದಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಗಂಭೀರವಾಗಿ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಉಳಿದ ಐವರನ್ನು ನಾರಾಯಣ ನೇತ್ರಾಲಯಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಅವರಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉಳಿದ ಮೂವರಲ್ಲಿ ಒಬ್ಬರಿಗೆ ಸೋಮವಾರ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ವೈದ್ಯರ ನಿರ್ಲಕ್ಷವಿಲ್ಲ: ನೇತ್ರಾಧಿಕಾರಿಗಳ ಸಂಘ
ಮಿಂಟೊ ಆಸ್ಪತ್ರೆಯಲ್ಲಿ ರೋಗಿಗಳಿಗೆ ದೃಷ್ಟಿ ಸಮಸ್ಯೆ ಉಂಟಾಗಲು ವೈದ್ಯರು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಲ್ಲ. ಬದಲಿಗೆ ಔಷಧಿಯ ಅಡ್ಡಪರಿಣಾಮದಿಂದ ರೋಗಿಗಳ ಕಣ್ಣಿನಲ್ಲಿ ಸೋಂಕು ಉಂಟಾಗಿ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ತಿಳಿಸಿದ್ದಾರೆ.
ಸಚಿವರ ಭೇಟಿ: ಘಟನೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಸಾಂತ್ವನ ಹೇಳಿದರು.