ರಕ್ತ ಚಂದನ ಮಾರಾಟ ಆರೋಪ: ಇಬ್ಬರ ಬಂಧನ, 1,454 ಕೆಜಿ ರಕ್ತ ಚಂದನ ಜಪ್ತಿ
ಬೆಂಗಳೂರು, ಜು.22: ರಕ್ತ ಚಂದನ ಮಾರಾಟ ಆರೋಪದಡಿ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಗ್ರಾಮಾಂತರ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸಿ, 1,454 ಕೆಜಿ ರಕ್ತಚಂದನ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕಟ್ಟಿಗೇನಹಳ್ಳಿಯ ಮಝೀದ್ ಹಾಗೂ ಇವರ ಪುತ್ರ ಬಷೀರ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಬೆಂಗಳೂರು ಗ್ರಾಮಾಂತರ ಪೋಲಿಸರಿಗೆ ಸಿಕ್ಕಿತ್ತು. ತಕ್ಷಣವೇ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಮನೆಗೆ ಭೇಟಿ ನೀಡಿ ಹುಡುಕಾಟ ನಡೆಸಿದ್ದರು. ಆದರೆ, ಎಲ್ಲಿಯೂ ರಕ್ತಚಂದನ ಪತ್ತೆಯಾಗಿರಲಿಲ್ಲ. ಹೀಗಾಗಿ, ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ರಕ್ತಚಂದನ ಬಚ್ಚಿಟ್ಟಿದ್ದ ಜಾಗದ ಮಾಹಿತಿ ಬಾಯಿಬಿಟ್ಟಿದ್ದಾರೆ.
ಪ್ರಕರಣ ಸಂಬಂಧ ಹೊಸಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story