ವಿಶ್ವಾಸಮತ ವಿಳಂಬ ಅನೈತಿಕವಾದರೆ, ಆಪರೇಷನ್ ಕಮಲ ನೈತಿಕವೇ?: ಸಚಿವ ಕೃಷ್ಣಬೈರೇಗೌಡ
ಬೆಂಗಳೂರು, ಜು. 22: ‘ವಿಶ್ವಾಸಮತ ಯಾಚನೆ ವಿಳಂಬ ಅನೈತಿಕ ಎನ್ನುವ ಬಿಜೆಪಿ ಮುಖಂಡರಿಗೆ, ಕೋಟಿ ಕೋಟಿ ರೂಪಾಯಿ ಶಾಸಕರಿಗೆ ಆಮಿಷವೊಡ್ಡಿರುವ ಆಪರೇಷನ್ ಕಮಲ ನೈತಿಕವೇ’ ಎಂದು ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲಿನ ಮುಂದುವರೆದ ಚರ್ಚೆಯಲ್ಲಿ ಮಾತನಾಡಿದ ಅವರು, ಅತೃಪ್ತ ಶಾಸಕರು ಮತ್ತು ಬಿಜೆಪಿ ನಾಯಕರ ಜತೆ ನಡೆಸಿದ್ದಾರೆನ್ನಲಾದ ಸಾರ್ವಜನಿಕವಾಗಿ ಲಭ್ಯವಾಗಿರುವ ಆಡಿಯೋ ಮತ್ತು ವಿಡಿಯೋ ದಾಖಲೆಗಳನ್ನು ಆಧರಿಸಿ ‘ಆಪರೇಷನ್ ಕಮಲ’ವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ವಿಶ್ವಾಸವಿಲ್ಲದೆ ಮೈತ್ರಿ ನಾಯಕರು ನೈತಿಕತೆ ಇದ್ದರೆ ಕೂಡಲೇ ಬಹುಮತ ಸಾಬೀತುಪಡಿಸಲಿ ಎಂದು ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ. ಆದರೆ, ಹೀಗೆ ಹೇಳಲು ಅವರಿಗೇನು ನೈತಿಕತೆ ಇದೆ. ಆಪರೇಷನ್ ಕಮಲ ಮೂಲಕ ಸರಕಾರವನ್ನೇ ಉರುಳಿಸಿ ತಾವು ಸರಕಾರ ರಚಿಸುವ ತರಾತುರಿಯಲ್ಲಿದ್ದಾರೆ ಎಂದು ಟೀಕಿಸಿದರು.
ರಾಜೀನಾಮೆ ನೀಡಿರುವ ಅತೃಪ್ತರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ 7-8 ತಿಂಗಳಿಂದ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿದ್ದಾರೆ. ಈಗಾಗಲೇ ಅವರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ ಎಂದು ಗಮನ ಸೆಳೆದರು.
ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಬಿಜೆಪಿ ಮುಖಂಡರೊಬ್ಬರ ಜತೆ ನಡೆಸಿರುವ ಸಂಭಾಷಣೆ ಬಹಿರಂಗಗೊಂಡಿದ್ದು, 25ಕೋಟಿ ರೂ. ಕೊಡುಗೆ ಹಾಗೂ ಸಚಿವ ಸ್ಥಾನದ ಆಮಿಷ. ಇದೇನೂ ಕಲ್ಪನೆಯಲ್ಲ, ನೇರವಾಗಿಯೇ ನಮ್ಮ ಪಕ್ಷದ ಶಾಸಕರಿಗೆ ಆಮಿಷವೊಡ್ಡಲಾಗಿದೆ ಎಂಬುದು ಬಹಿರಂಗಗೊಂಡಿದೆ ಎಂದರು.
ಹೊಸಕೋಟೆ ಕ್ಷೇತ್ರ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಸೇರಿದಂತೆ ಎಲ್ಲ ಅತೃಪ್ತ ಶಾಸಕರನ್ನು ವಿಮಾನ ಹತ್ತಿಸುವ ವೇಳೆ ವಿಪಕ್ಷ ನಾಯಕ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ ಸಂತೋಷ್, ಮಾಜಿ ಡಿಸಿಎಂ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾಣಿಸಿಕೊಂಡಿದ್ದಾರೆ.
ಇದು ಆಪರೇಷನ್ ಕಮಲ ಅಲ್ಲವೇ? ಇದರ ಹಿಂದೆ ಬಿಜೆಪಿ ಕೈವಾಡವಿಲ್ಲವೇ? ಎಂದು ಪ್ರಶ್ನಿಸಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಪಕ್ಷೇತರ ಶಾಸಕ ಆರ್.ಶಂಕರ್ ಕಾಂಗ್ರೆಸ್ ಪಕ್ಷದ ಜತೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದು, ಈ ಬಗ್ಗೆಯೂ ಸ್ಪೀಕರ್ ಮುಂದೆ ಪ್ರಕರಣವಿದೆ.
15 ಮಂದಿ ಶಾಸಕರನ್ನು ಮುಂಬೈನಲ್ಲಿ ಕೂಡಿ ಹಾಕಲಾಗಿದೆ. ಎಲ್ಲರೂ ಒಟ್ಟಿಗೆ ರಾಜೀನಾಮೆ ನೀಡಿದ್ದು, ಇದು ಆಕಸ್ಮಿಕ ಅಲ್ಲವೇ ಅಲ್ಲ. ಅತೃಪ್ತರ ಜತೆ ಬಿಜೆಪಿ ಮುಖಂಡರು ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳ, ಗೋವಾ, ಆಂಧ್ರ, ತೆಲಂಗಾಣದಲ್ಲಿ ಆಪರೇಷನ್ ಕಮಲ ನಡೆಸಿದ್ದಾರೆ ಎಂದು ಟೀಕಿಸಿದರು.
ನಿಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಫೇಲ್ ಆಗಿ ಈಗ ನನಗೆ ಪಾಸ್ ಮಾರ್ಕ್ಸ್ ಕೊಡಿ ಅಂದ್ರೆ ಹೇಗೇ ಕೊಡಲಿಕ್ಕೆ ಬರುತ್ತದೆ. ರಾಜೀನಾಮೆ ನೀಡಿರುವ ಶಾಸಕರ ಬಗ್ಗೆ ಸಂಶೋಧನೆ ಮಾಡುವ ಬದಲು ನಾಲ್ಕೈದು ಶಾಸಕರನ್ನು ಕರೆದುಕೊಂಡು ಬಂದಿದ್ದರೆ ನನಗೆ ಇಷ್ಟೆಲ್ಲ ಸಂಕಷ್ಟವೇ ಇರುತ್ತಿರಲಿಲ್ಲ
-ಕೆ.ಆರ್.ರಮೇಶ್ ಕುಮಾರ್, ಸ್ಪೀಕರ್
ಶಾಸಕರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಖುದ್ದು ರಾಜ್ಯಪಾಲರೇ ಸ್ಪೀಕರ್ಗೆ ಬರೆದಿರುವ ಪತ್ರದಲ್ಲಿ ಕುದುರೆ ವ್ಯಾಪಾರದ ಬಗ್ಗೆ ಉಲ್ಲೇಖಿಸಿದ್ದಾರೆ. ಹೀಗಾಗಿ ಸದನದಲ್ಲಿ ಚರ್ಚೆ ನಡೆದರೆ ತಪ್ಪೇನಿದೆ’
-ಪ್ರಿಯಾಂಕ್ ಖರ್ಗೆ, ಸಚಿವ