ಮತ್ತೋರ್ವ ಅನರ್ಹ ಶಾಸಕರಿಂದ ರಾಜಕೀಯ ನಿವೃತ್ತಿಯ ಇಂಗಿತ
ಬೆಂಗಳೂರು, ಜು.29: ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಂಟಿಬಿ ನಾಗರಾಜ್ ಅವರು ಕೂಡಾ ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿರುವ ಮಾಜಿ ಸಚಿವರೂ ಆಗಿರುವ ಎಂಟಿಬಿ ನಾಗರಾಜ್ ಮಾಧ್ಯಮದೆದುರು ಮಾತನಾಡಿ, ಮೈತ್ರಿ ಸರಕಾರದ ದುರಾಡಳಿತಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದೇವೆಯೇ ಹೊರತು ಹಣ, ಅಧಿಕಾರದ ಆಮಿಷಕ್ಕೆ ಒಳಗಾಗಿಲ್ಲ. ದೇವರು ನಮಗೆ ಅಂತ ಪರಿಸ್ಥಿತಿ ತಂದಿಲ್ಲ. ಸದ್ಯ ನಾನು ರಾಜಕೀಯ ನಿವೃತ್ತಿಯಾಗಲು ಗಂಭೀರ ಚಿಂತನೆ ನಡೆಸಿದ್ದೇನೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ತಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುವ ಮಾತುಗಳನ್ನಾಡಿದ್ದಾರೆ. ಅವರ ಸವಾಲನ್ನು ಸ್ವೀಕರಿಸಲು ನಾನು ಸಿದ್ಧ ಎಂದು ಎಂಟಿಬಿ ಹೇಳಿದ್ದಾರೆ.
ನನಗೆ ಈ.ಡಿ. ಹಾಗೂ ಐ.ಟಿ. ಬೆದರಿಕೆ ಇಲ್ಲ. ಪ್ರತಿವರ್ಷ ತೆರಿಗೆಯನ್ನು ಪ್ರಾಮಾಣಿಕವಾಗಿ ಕಟ್ಟಿದ್ದೇನೆ. ನನಗೆ ಯಾವುದೇ ಭಯವಿಲ್ಲ ಎಂದಿದ್ದಾರೆ.
ನನ್ನ ಮಗನ ರಾಜಕೀಯ ಪ್ರವೇಶ ಕುರಿತು ಸದ್ಯಕ್ಕೆ ಯಾವ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರುವುದು ಅವನಿಗೆ ಬಿಟ್ಟ ವಿಷಯ. ಯಾವ ಪಕ್ಷಕ್ಕೆ ಸೇರಬೇಕೆಂದು ತೀರ್ಮಾನ ಮಾಡಲು ಅವನು ಸ್ವತಂತ್ರನಿದ್ದಾನೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.