ದರೋಡೆಗೆ ಸಂಚು ಆರೋಪ: ರೌಡಿ ಸೇರಿ ಇಬ್ಬರನ್ನು ಬಂಧಿಸಿದ ಸಿಸಿಬಿ
ಬೆಂಗಳೂರು, ಜು.29: ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ರೌಡಿ ಚೇತನ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ಚೇತನ್ ಕುಮಾರ್(34), ಆತನ ಸಹಚರ ಮೀನಾಕ್ಷಿ ನಗರದ ರಾಹುಲ್(20)ನನ್ನು ಬಂಧಿಸಲಾಗಿದ್ದು, ಇದೇ ಪ್ರಕರಣ ಸಂಬಂಧ ಲಗ್ಗೆರೆಯ ಸತೀಶ, ಕಾಮಾಕ್ಷಿ ಪಾಳ್ಯದ ಭಾರ್ಗವ ಹಾಗೂ ಕಿಶೋರ್ಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಆರೋಪಿಗಳು ಸಾಣೆಗೊರವನಹಳ್ಳಿಯ ನೇತಾಜಿ ಪಾರ್ಕ್ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಚೇತನ್ ಹಾಗೂ ರಾಹುಲ್ನನ್ನು ಬಂಧಿಸಿದ್ದಾರೆ. ರೌಡಿ ಚೇತನ್ ವಿರುದ್ಧ ಒಂದು ಕೊಲೆ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.
ಈತನಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story