ಟಿಪ್ಪು ದಲಿತರ ಅಭಿವೃದ್ಧಿಗೆ ಶ್ರಮಿಸಿದ ಶ್ರೇಷ್ಠ ಆಡಳಿತಗಾರ: ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮುನಿಯಪ್ಪ
ಬೆಂಗಳೂರು, ಜು.30: ದಲಿತ ಮಹಿಳೆಯರಿಗೆ ರವಿಕೆ ತೋಡುವುದಕ್ಕೂ ಅವಕಾಶವಿಲ್ಲದ ಕಾಲದಲ್ಲಿ, ಟಿಪ್ಪುಸುಲ್ತಾನ್ ಈ ಅನಿಷ್ಟ ಪದ್ದತಿಯನ್ನು ವಿರೋಧಿಸಿ, ದಲಿತ ಮಹಿಳೆಯರಿಗೆ ರವಿಕೆ ತೊಡಲು ಅವಕಾಶ ಮಾಡಿಕೊಟ್ಟ ಮೊದಲಿಗ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ.
ಟಿಪ್ಪು ಸುಲ್ತಾನ್ ಜಯಂತಿ ಬಿಎಸ್ಪಿ ಸರಕಾರ ರದ್ದುಗೊಳಿಸಿರುವ ಕ್ರಮವನ್ನು ಖಂಡಿಸಿ ಮಾತನಾಡಿದ ಅವರು, ನೂರು ವರ್ಷ ತಲೆತಗ್ಗಿಸಿ ಬಾಳುವುದಕ್ಕಿಂತ ಒಂದು ವರ್ಷ ತಲೆ ಎತ್ತಿ ರಾಜ್ಯ ಆಳಬೇಕು ಎಂಬ ಭಾವನೆ ಹೊಂದಿದ್ದ ಟಿಪ್ಪುನಾಡು ಕಂಡ ಕೆಚ್ಚೆದೆ ವೀರ. ಶೌರ್ಯ, ಧೈರ್ಯ, ಗಾಂಭೀರ್ಯಕ್ಕೆ ಹೆಸರಾಗಿದ್ದ ಟಿಪ್ಪುಸುಲ್ತಾನ್ ಬ್ರಿಟಿಷರ ತಂತ್ರ, ಕುತಂತ್ರವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಏಕಾಂಗಿ ಹೋರಾಟ ನಡೆಸಿದ ಮಹಾನ್ ವೀರ ಎಂದು ನುಡಿದರು.
ಅಂದಿನ ಕಾಲದಲ್ಲಿಯೇ ತುಂಬಾ ದೂರದೃಷ್ಟಿ ಆಲೋಚನೆ ಹೊಂದಿದ್ದ ಟಿಪು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದ, ಜಮೀನು ಇಲ್ಲದ ಬಡವರಿಗೆ ಉಳ್ಳವರಿಂದ ಪಡೆದ ಜಮೀನುಗಳನ್ನು ನೀಡಿದ್ದ, ದಲಿತರ ಅಭಿವೃದ್ಧಿಗೆ ಶ್ರಮಿಸಿದ ಶ್ರೇಷ್ಠ ಆಡಳಿತಗಾರ. ಆದರೆ, ಇಂದು ಬಿಜೆಪಿ ಟಿಪ್ಪು ಸುಲ್ತಾನ್ ಅವರನ್ನು ಕೋಮು ದ್ವೇಷದ ಭಾವನೆ ಮೂಡಿಸಲು ಬಳಕೆ ಮಾಡಿಕೊಳ್ಳುವುದು ದುರಂತ ಎಂದರು.