ತಿರುವಳ್ಳುವರ್ ವಿಶ್ವ ಬಾಂಧವ್ಯದ ಸತ್ವ ಸಾರಿದ ಸಂತ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಆ.11: ಮಹಾನ್ ತತ್ವಜ್ಞಾನಿ, ತಿರುವಳ್ಳುವರ್ ಅವರು ರಚಿಸಿದ ನೀತಿ ಗ್ರಂಥಗಳನ್ನು ಓದಿಕೊಂಡರೆ, ಮನುಷ್ಯರ ಮಧ್ಯೆ ಭಿನ್ನತೆ, ಸಂಶಯದ ಬೀಜ ಮೊಳಕೆಯೊಡೆಯುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರವಿವಾರ ಹಲಸೂರಿನಲ್ಲಿರುವ ತಿರುವಳ್ಳುವರ್ ಅವರ ಪ್ರತಿಮೆ ಸಂಸ್ಥಾಪನಾ ದಿನದ ಅಂಗವಾಗಿ ತಿರುವಳ್ಳುವರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ತಿರುವಳ್ಳುವರ್ ರಚಿಸಿದ ತಿರುಕ್ಕುರಳ್ ಗ್ರಂಥ ವಿಶ್ವದ ಅತಿ ಹೆಚ್ಚು ಭಾಷೆಗಳಲ್ಲಿ ಭಾಷಾಂತರಗೊಂಡಿದ್ದು, ಇವರು ರಚಿಸಿದ ಗ್ರಂಥಗಳನ್ನು ಓದಿಕೊಂಡರೇ, ಮನುಷ್ಯರ ಮಧ್ಯೆ ಭಿನ್ನತೆಗೆ ಅವಕಾಶವಿರುವುದಿಲ್ಲ. ಅಲ್ಲದೆ, ತಿರುವಳ್ಳುವರ್ ವಿಶ್ವಬಾಂಧವ್ಯದ ಸತ್ವ ಸಾರಿದ ಸಂತ ಎಂದು ಹೇಳಿದರು.
ತಮಿಳು ಭಾಷಿಕರು, ಕನ್ನಡಿಗರು ಸೌಹಾರ್ದಯುತವಾಗಿ ಬದುಕುತ್ತಿದ್ದು, ತಮಿಳರ ಹಾಗೂ ಕನ್ನಡಿಗರ ಸೌಹಾರ್ದಕ್ಕಾಗಿ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಪ್ರತಿಮೆ ಸ್ಥಾಪಿಸಿದ್ದೆ ಎಂದು ಹೇಳಿದರು.
ಕೇಂದ್ರದ ನೆರವಿನ ಬಗ್ಗೆ ಚರ್ಚೆ: ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರ ಕಡೆ ಹೊರಟಿದ್ದೇನೆ. ಅಮಿತ್ ಶಾ ಅವರ ಜೊತೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆಯೂ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ಮಾಲಾರ್ಪಣೆ ವೇಳೆ ಅನರ್ಹ ಶಾಸಕ ರೋಷನ್ ಬೇಗ್, ಸಂಸದ ಪಿ.ಸಿ.ಮೋಹನ್ ಉಪಸ್ಥಿತರಿದ್ದರು.