10 ಕೋಟಿ ರೂ.ಗೂ ಅಧಿಕ ದೇಣಿಗೆ ನೀಡುವ ಸಂಸ್ಥೆಯ ಹೆಸರು ಗ್ರಾಮಕ್ಕೆ ನಾಮಕರಣ: ಯಡಿಯೂರಪ್ಪ
ಪ್ರವಾಹ ಪೀಡಿತರ ನೆರವಿಗೆ ಧಾವಿಸಲು ಮುಖ್ಯಮಂತ್ರಿ ಮನವಿ
ಬೆಂಗಳೂರು, ಆ. 14: ‘ನೆರೆ ಪೀಡಿತ ಗ್ರಾಮಗಳ ಪುನಶ್ಚೇತನಕ್ಕೆ 10ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ನೆರವು ನೀಡಲು ಉದ್ಯಮಿಗಳಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಇವರ ನೆರವಿಗೆ ಎಲ್ಲ ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳು ನಿಂತು ಉದಾತ್ತವಾಗಿ ದೇಣಿಗೆ ನೀಡುವಂತೆ ಇದೇ ವೇಳೆ ಕೋರಿದರು.
ರಾಜ್ಯ ಸರಕಾರದ ಕರೆಗೆ ಮನ್ನಣೆ ನೀಡಿ 60ಕ್ಕೂ ಹೆಚ್ಚು ಕಂಪೆನಿ ಮುಖ್ಯಸ್ಥರು ಆಗಮಿಸಿ ನೆರವು ನೀಡುವ ಭರವಸೆ ನೀಡಿದರು. ಸಭೆಯಲ್ಲಿ ಎಲ್ಲ ಉದ್ದಿಮೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. 23 ಜಿಲ್ಲೆಯ 103 ತಾಲೂಕು ನೆರೆ ಪೀಡಿತ ಎಂದು ಘೋಷಿಸಲಾಗಿದೆ ಎಂದರು.
ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಮಳೆಯಿಂದ ಭೂ ಕುಸಿತ ಸಂಭವಿಸಿದೆ. ಹಳ್ಳಿ, ಪಟ್ಟಣ ಜಲಾವೃತವಾಗಿದೆ. ಸೇತುವೆ ಮುಳುಗಿ, ರಸ್ತೆ ಹಾಳಾಗಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈ ವರೆಗೂ 6.97 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 1160 ಪರಿಹಾರ ಕೇಂದ್ರ ತೆರೆಯಲಾಗಿದೆ. 56 ಸಾವಿರ ಮನೆ ವಾಸಕ್ಕೆ ಯೋಗ್ಯವಿಲ್ಲ ಎಂದು ಘೋಷಿಸಿದ್ದೇವೆ. ಅಧಿಕಾರಿಗಳು, ನಾನು ಪ್ರವಾಹ ಮಾಡಿ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿದ್ದೇವೆ. ರಕ್ಷಣೆ, ಪರಿಹಾರ ಕೆಲಸ ನಡೆಯುತ್ತಿದೆ. ಕಳೆದೆರಡು ದಿನದಿಂದ ಮಳೆ ಹತೋಟಿಗೆ ಬಂದಿದೆ. ಸಂಪೂರ್ಣ ಚಿತ್ರಣ, ನಷ್ಟ ತಿಳಿಯಲು ಇನ್ನು ಕೆಲವು ದಿನ ಬೇಕಾಗಲಿದೆ. 23 ಜಿಲ್ಲೆಗಳ ಪೈಕಿ 200ಗ್ರಾಮವನ್ನು ಸ್ಥಳಾಂತರಿಸುವ ಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಉದ್ಯಮಿದಾರರು ಸಹಾಯ ಹಸ್ತ ಚಾಚಬೇಕು. ಉದಾರ ಮನಸ್ಸಿನಿಂದ ದೇಣಿಗೆ ನೀಡಿ ಎಂದರು.
10 ಕೋಟಿಗೂ ಹೆಚ್ಚು ನೆರವು ನೀಡಿದ ಗ್ರಾಮಕ್ಕೆ ನಿಮ್ಮ ಸಂಸ್ಥೆ ಹೆಸರನ್ನೆ ಇಡಲು ತೀರ್ಮಾನಿಸಿದ್ದೇವೆ. ಆ ಗ್ರಾಮವನ್ನು ಹಣ ನೀಡುವ ಸಂಸ್ಥೆ ದತ್ತು ಪಡೆದುಕೊಂಡಂತೆ ಬಿಂಬಿಸಲಾಗುವುದು ಎಂದು ಅವರು, ಆಹಾರ ಧಾನ್ಯ ಇತರೆ ಮೂಲಸೌಕರ್ಯ ಒದಗಿಸಿಕೊಡುವ ಬದಲು ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದರೆ ಸಂತ್ರಸ್ತರಿಗೆ ಹೆಚ್ಚು ನೆರವಾಗಲಿದೆ ಎಂದರು.
ಕೈಗಾರಿಕೋದ್ಯಮಿಗಳೊಂದಿಗೆ ನಮ್ಮ ಸರಕಾರ ಇದೆ. ನೀವು ಏನು ಸಹಕಾರ ಬಯಸುತ್ತೀರ ಅದನ್ನು ನಾವು ಕೊಡಲು ಸಿದ್ಧ. ನಿಮ್ಮ ಸಂಸ್ಥೆ ಉದ್ಯಮ ನಡೆಸಲು ಬೇಕಾದ ಮೂಲಸೌಕರ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯ ಸರಕಾರದಿಂದ ಯಾವುದೇ ಸಮಸ್ಯೆ, ತೊಡಕು ಆಗುವುದಿಲ್ಲ. ಒಂದು ವೇಳೆ ಅನಗತ್ಯ ಸಮಸ್ಯೆ ಆಗುತ್ತಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಎಲ್ಲ ಸಂಸ್ಥೆಗಳ ಮುಖ್ಯಸ್ಥರಿಗೆ ಭರವಸೆ ನೀಡಿದರು.
ಕಂಪೆನಿಗಳ ಕೊಡುಗೆ: ಬ್ರಿಟಾನಿಯಾ ಕಂಪೆನಿಯು ಆಹಾರ ಪದಾರ್ಥಗಳ ಕೊಡುಗೆ ನೀಡಿದೆ. ಟಿವಿಎಸ್ ಮೋಟಾರು ಸಂಸ್ಥೆ 1ಕೋಟಿ ರೂ.ದೇಣಿಗೆಯನ್ನು ಸಿಎಂ ಪರಿಹಾರ ನಿಧಿಗೆ ನೀಡಲಿದೆ. ಜಿಎಸ್ಕೆ ಸಂಸ್ಥೆ ಹಾಗೂ ಯೂನಿವರ್ಸಲ್ ಬಿಲ್ಡರ್ಸ್ ಎಲ್ಲ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ ನೀಡಲಿದೆ.
ಶಾಹಿ ಎಕ್ಸ್ಪೋರ್ಟ್ಸ್ ಸೀರೆ-ಉಡುಪುಗಳ ನೆರವು, ಕಾರ್ಪೋರೇಷನ್ ಬ್ಯಾಂಕ್ ವಾರದಲ್ಲಿ ದೇಣಿಗೆ ನೀಡಲಿದೆ. ಟಯೋಟ ಸಂಸ್ಥೆ 2 ಕೋಟಿ ರೂ., ಲೋಗ್ಸೋಗ್ರೂಪ್ 25 ಲಕ್ಷ ರೂ., ಕ್ರೆಡಾಯ್ 3ಕೋಟಿ ರೂ., ಯುನೈಟೆಡ್ ಟೆಕ್ನಾಲಜಿ ಅಗತ್ಯ ಮೂಲ ಸೌಕರ್ಯ ಪೂರೈಕೆ, ಜೆಕೆ ಸಿಮೆಂಟ್ನಿಂದ ಆಹಾರ ಪದಾರ್ಥಗಳ ವಿತರಣೆ, ವೋಲ್ವೋ ಗ್ರೂಪ್ನ ನೌಕರರ 1 ದಿನದ ಸಂಬಳ ಸೇರಿ ಇತರೆ ಕಂಪೆನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುವ ಭರವಸೆ ನೀಡಿವೆ ಎಂದು ತಿಳಿಸಲಾಗಿದೆ.