ರಾಜ್ಯ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.16: ಯಾವುದೇ ರೀತಿಯಲ್ಲಿ ವಿಧ್ವಂಸಕ ಕೃತ್ಯಗಳು ನಡೆಯುವ ಶಂಕೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಜಾಗ್ರತೆಯಾಗಿರುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ತಮ್ಮ ಸಿಬ್ಬಂದಿಗೆ ಅಧಿಕೃತವಾಗಿ ಸೂಚಿಸಿದ್ದಾರೆ.
ಇಲ್ಲಿನ ವಿಧಾನಸೌಧ, ಮೆಜೆಸ್ಟಿಕ್, ಮೆಟ್ರೋ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಮಾಲ್, ಹೋಟೆಲ್ ಇತ್ಯಾದಿ ಜನಸಂದಣಿ ಇರುವ ಜಾಗಗಳಲ್ಲಿ ಭದ್ರತೆಯನ್ನು ಬಿಗಿಗಿಳಿಸುವಂತೆ ಹಾಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಮುಖ ಸ್ಥಳಗಳಲ್ಲೇ ಇದ್ದು ಖುದ್ದಾಗಿ ಭದ್ರತೆಯ ಉಸ್ತುವಾರಿ ವಹಿಸಿಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಮತ್ತು ವಾಹನಗಳನ್ನು ಕಂಡರೆ ತಪಾಸಣೆ ಮಾಡಬೇಕು. ಖಾಸಗಿ ಸಿಬ್ಬಂದಿ ಅನ್ನು ಭದ್ರತೆಗೆ ಬಳಸಿಕೊಳ್ಳಬೇಕು. ಬೀಟ್ ಪೊಲೀಸರು ತಮ್ಮ ತಮ್ಮ ಪ್ರದೇಶಗಳಲ್ಲಿ ಎಚ್ಚರಿಕೆಯಿಂದಿರಬೇಕು. ಚೆಕ್ಪೋಸ್ಟ್ ಗಳಲ್ಲಿ ಹಾಗೂ ನಗರದ ಒಳಗೆ ಮತ್ತು ನಗರದಿಂದ ಹೊರಹೋಗುವ ಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ಪಟ್ಟಿ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ.