ಬಿಬಿಎಂಪಿ: ಕಸದ ನಿರ್ವಹಣೆ ಗಮನಿಸಲು ನೋಡಲ್ ಅಧಿಕಾರಿಗಳ ನೇಮಕ
ಬೆಂಗಳೂರು, ಆ.16: ಉದ್ಯಾನನಗರಿಯಲ್ಲಿ ಕಸ ಸಮಸ್ಯೆ ಬಗೆಹರಿಸುವ ಸಂಬಂಧ ಪಾಲಿಕೆಯ ಎಲ್ಲ ವಾರ್ಡ್ಗಳಿಗೆ ತಲಾ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಅಧಿಕಾರಿಗಳು ವಾರದಲ್ಲಿ ಕನಿಷ್ಠ 3 ದಿನ ವಾರ್ಡ್ಗಳಿಗೆ ಭೇಟಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಸೂಪರಿಂಟೆಂಡಿಂಗ್ ಎಂಜಿನಿಯರ್, ಕಾರ್ಯಪಾಲಕ ಎಂಜಿನಿ ಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಂತದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಸಮರ್ಪಕವಾಗಿ ವಿಂಗಡಣೆ ಆಗುತ್ತಿದೆಯೆ? ಯಾವುದೇ ಮನೆಗಳನ್ನೂ ಬಿಡದಂತೆ ಕಸ ಸಂಗ್ರಹಿಸಲಾಗುತ್ತಿದೆಯೆ? ಎಂಬುದನ್ನು ಪರಿಶೀಲಿಸಬೇಕು. ತಾಜ್ಯ ವಿಂಗಡಣೆ ಮಾಡದ ಮನೆಗಳಿಗೆ ಖುದ್ದು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಮಿಶ್ರ ಕಸ ನೀಡುವುದನ್ನು ಮುಂದುವರಿಸಿದರೆ ಅಂತಹವರಿಗೆ ದಂಡ ವಿಧಿಸಲು ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಲಾಗಿದೆ.
ನೋಡಲ್ ಅಧಿಕಾರಿಗಳು ವಾರದಲ್ಲಿ ಮೂರು ದಿನವಾದರೂ ವಾರ್ಡ್ಗಳಿಗೆ ಬೆಳಗ್ಗೆ 6.30ರ ವೇಳೆಗೆ ಭೇಟಿ ನೀಡಬೇಕು. ಪೌರ ಕಾರ್ಮಿಕರ ಹಾಜರಾತಿ, ಕಸ ಸಾಗಿಸುವ ವಾಹನಗಳು, ತಳ್ಳುವ ಗಾಡಿಗಳ ಸಂಖ್ಯೆ ನಿಗದಿಯಂತೆ ಇವೆಯೇ ಎಂಬುದನ್ನು ಪರಿಶೀಲಿಸಬೇಕು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ