ಜನ್ಮಾಂತರದ ಕತೆ ಕಟ್ಟಿ ಲಕ್ಷಾಂತರ ರೂ. ಲಪಟಾಯಿಸಿದ ಜ್ಯೋತಿಷಿ
ದೂರು ದಾಖಲು
ಬೆಂಗಳೂರು, ಆ.21: ನಕಲಿ ಜ್ಯೋತಿಷಿ ಕೃತ್ಯಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ, ಇಲ್ಲೊಬ್ಬ ಜ್ಯೋತಿಷಿ, ಮಹಿಳೆಗೆ ಮೂರು ಜನ್ಮದಿಂದ ನಾವಿಬ್ಬರು ದಂಪತಿ ಎಂದು ನಂಬಿಸಿ, ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀನಿವಾಸ ನಗರದ ನಿವಾಸಿ ವೆಂಕಟ ಕೃಷ್ಣಾಚಾರ್ಯ(28) ಎಂಬಾತ ನಕಲಿ ಜ್ಯೋತಿಷಿ ಎನ್ನಲಾಗಿದ್ದು, ವಾಸ್ತುದೋಷ ನಿವಾರಣೆ ಮಾಡುತ್ತೇನೆಂದು ವಿಜಯನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರಿಗೆ ವಂಚಿಸಿರುವುದಾಗಿ ಹೇಳಲಾಗುತ್ತಿದೆ.
ಮನೆಯಲ್ಲಿ ವಾಸ್ತು ದೋಷವಿದೆ ಎಂದ ಆರೋಪಿ ಜ್ಯೋತಿಷಿ, ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ತದನಂತರ, ಕಳೆದ ಮೂರು ಜನ್ಮದಿಂದ ನಾವಿಬ್ಬರೂ ದಂಪತಿಗಳು. ಹಿಂದಿನ ಜನ್ಮದಲ್ಲಿ ನೀನು ದೊಡ್ಡ ಭರತನಾಟ್ಯ ಕಲಾವಿದೆಯಾಗಿದ್ದೆ. ನಿನ್ನ ಸಾವಿಗೆ ಹಿಂದಿನ ಜನ್ಮದಲ್ಲಿ ನಾನೆ ಕಾರಣವಾಗಿದ್ದು, ಈ ಜನ್ಮದಲ್ಲಿ ಕಾರಣಾಂತರಗಳಿಂದ ನಾವಿಬ್ಬರು ದೂರ ಆಗಿದ್ದೇವೆ. ನೀನು ನನ್ನನ್ನು ಮದುವೆಯಾದಾಗ ಮಾತ್ರ ನನಗೆ ಮೋಕ್ಷ ಸಾಧ್ಯ ಎಂದು ನಂಬಿಸಿದ್ದಾನೆ ಎಂದು ತಿಳಿದುಬಂದಿದೆ.
ಬಳಿಕ ಬೇರೆ ಬೇರೆ ಬ್ಯಾಂಕ್ಗಳಿಂದ ಮಹಿಳೆ ಹೆಸರಲ್ಲಿ 30 ಲಕ್ಷಕ್ಕೂ ಹೆಚ್ಚು ಸಾಲ ಪಡೆದುಕೊಂಡಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಪರ ಸಂಘಟನೆಗಳು ಜ್ಯೋತಿಷಿ ಮನೆಗೆ ಧಾವಿಸಿ, ಥಳಿಸಿ ನಂತರ ಹನುಮಂತನಗರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.