ಸೆ.8ಕ್ಕೆ ಬಂಟರ ಹೊಟೇಲ್ ಮಾಲಕರ ಸಮ್ಮಿಲನ
ಬೆಂಗಳೂರು, ಸೆ.6: ಬಂಟರ ಹೊಟೇಲ್ ಮಾಲಕರ ಸಮ್ಮಿಲನಕ್ಕಾಗಿ ಸೆ.8ರ ಬೆಳಗ್ಗೆ 10.30ಕ್ಕೆ ನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಬಂಟರ ಆತಿಥ್ಯ ಕಾರ್ಯಕ್ರಮವನ್ನು ಬಂಟರ ಹೊಟೇಲ್ ಮಾಲಕರ ಸಂಘ ಆಯೋಜಿಸಿದೆ.
ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ಜಯಪ್ರಕಾಶ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಎಂ.ಕೃಷ್ಣಪ್ಪ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಅಜೀತ್ ಕುಮಾರ್ ಹೆಗಡೆ ಶಾನಡಿ ಪಾಲ್ಗೊಳ್ಳಲಿದ್ದಾರೆ. ಇನ್ನು, ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೊಟೇಲ್ ಉದ್ಯಮ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಯುವ ಪೀಳಿಗೆಗೆ ಸುಸ್ಥಿರ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಹೊಟೇಲ್ ಉದ್ಯಮ ಸಾಕಷ್ಟು ಸಹಕಾರಿಯಾಗಿದೆ. ದೇಶಿ ಆಹಾರ ಪದ್ಧತಿಗೆ ಮಾರು ಹೋಗಿರುವ ಯುವಕರನ್ನು ದೇಶೀಯ ಆಹಾರ ಪದ್ಧತಿಯತ್ತ ಸೆಳೆಯುವಲ್ಲಿ ಹೆಚ್ಚು ಗುಣಮಟ್ಟ ಹಾಗೂ ಉತ್ತಮ ಸೇವೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಸಮ್ಮಿಲನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಯುವ ಉದ್ಯಮಿಗಳಿಗೆ ಹೊಟೇಲ್ ಉದ್ಯಮ ಕುರಿತಂತೆ ವಿಚಾರ ಸಂಕಿರಣ ಕುರುಕ್ಷೇತ್ರಕ್ಕೊಂದು ಆಯೋಗ, ಯಕ್ಷ ಪ್ರಯೋಗ, ಎಲ್ಲಾ ಸಮ 10, ಕುಂದಾಪ್ರ ನಗೆ ನಾಟಕ ಏರ್ಪಡಿಸಲಾಗಿದೆ. ಅಲ್ಲದೆ, ಸಂಜೆ 5ಗಂಟೆಗೆ ಸಮಾರೋಪ ಸಮಾರಂಭವನ್ನು ಆಯೋಜಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಡಿ.ವಿ.ಸದಾನಂದ ಗೌಡ, ಉಪ ಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ, ಸಚಿವ ಸಿ.ಟಿ.ರವಿ, ಮಹಾನಗರ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ಸೇರಿದಂತೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.