ಸಂಜೀವ ಮಠಂದೂರು, ಅನಂತಕುಮಾರ್ ಹೆಗಡೆ ಮನೋ ವಿಕೃತಿಯಿಂದ ಬಳಲುತ್ತಿದ್ದಾರೆ: ಇಲ್ಯಾಸ್ ತುಂಬೆ
ಬೆಂಗಳೂರು, ಸೆ.10: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ನಿಷ್ಠಾವಂತ, ದಕ್ಷ ಹಾಗೂ ಮಾನವೀಯ ಕಳಕಳಿಯ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಬಗ್ಗೆ ಕೀಳು ಮಟ್ಟದ ಮಾತುಗಳನ್ನು ಆಡಿದ ಬಿಜೆಪಿ ಶಾಸಕ ಸಂಜೀವ ಮಠಂದೂರು ಮತ್ತು ಸಂಸದ ಅನಂತ ಕುಮಾರ್ ಹೆಗಡೆ ಮುಂತಾದ ಬಿಜೆಪಿ ನಾಯಕರು ಮನೋ ವಿಕೃತಿಯಿಂದ ಬಳಲುತ್ತಿದ್ದಾರೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಅವ್ಯಾಹತ ಹಿಂಸೆ, ಮಾನವ ಹಕ್ಕುಗಳ ಉಲ್ಲಂಘನೆ, ಸರಕಾರವನ್ನು ಟೀಕಿಸುವವರ ಮೇಲೆ ದೌರ್ಜನ್ಯ, ಸಂವಿಧಾನದ ಕಡೆಗಣನೆ, ಸರಕಾರಿ ಸ್ವಾಯತ್ತ ಸಂಸ್ಥೆಗಳ ಮೇಲೆ ದಬ್ಬಾಳಿಕೆ, ನೆಲಕಚ್ಚಿದ ಆರ್ಥಿಕತೆ, ವಾಕ್ಸ್ವಾತಂತ್ರ್ಯ ಹರಣ, ಅಘೋಷಿತ ತುರ್ತು ಪರಿಸ್ಥಿತಿಗಳನ್ನೆಲ್ಲಾ ಪ್ರತ್ಯಕ್ಷ ಕಂಡು ರೋಸಿ ಹೋದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತನ್ನ ಹುದ್ದೆಯನ್ನು ತ್ಯಜಿಸಿ ಪ್ರತಿಭಟನಾತ್ಮಕ ರಾಜೀನಾಮೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದ ಪ್ರಜಾಪ್ರಭುತ್ವ ಅತ್ಯಂತ ಗಂಭೀರ ಅಪಾಯದಲ್ಲಿದೆ ಎಂಬುವುದಕ್ಕೆ ಸೆಂಥಿಲ್ ಅವರ ಸಾಲಿನಲ್ಲಿ ರಾಜೀನಾಮೆ ನೀಡಿದ ಇನ್ನೊಬ್ಬ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸೇರಿದಂತೆ ಇನ್ನಿತರರೂ ಸೇರಿದ್ದಾರೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ. ಫ್ಯಾಸಿಸ್ಟ್ ಮತ್ತು ಮನುವಾದ ಸಿದ್ಧಾಂತದ ಹಾದಿಯಲ್ಲಿ ದೇಶವನ್ನು ವಿಭಜಿಸುತ್ತಾ ಉಗ್ರವಾದ ರಾಷ್ಟ್ರೀಯವಾದವೆಂಬ ವಿಕಲ್ಪವನ್ನು ಬಿತ್ತುತ್ತಿರುವ ಬಿಜೆಪಿ ಮತ್ತು ಸಂಘಪರಿವಾರಿಗಳಿಗೆ ಸೆಂಥಿಲ್ ನಡೆ ಖಂಡಿತ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಕರಾವಳಿಯ ಶಾಸಕರನ್ನೊಳಗೊಂಡಂತೆ ಮೋದಿ ಮತ್ತು ಶಾ ಭಕ್ತರು ದೇಶದ್ರೋಹಿ ಪಟ್ಟವನ್ನು ಬೇಕಾಬಿಟ್ಟಿ ಹಂಚುತ್ತಾ ತಾವೇ ದೇಶಭಕ್ತರೆಂದು ಹಪಹಪಿಸುತ್ತಿರುವುದು ಎಷ್ಟೊಂದು ಅಧಪತನಗೊಂಡಿದ್ದಾರೆ ಎನ್ನುವುದನ್ನು ಬಿಂಬಿಸುತ್ತದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ಹೇಳಿದ್ದಾರೆ.