ಗುರಿ ತಪ್ಪಿದ ಕಲ್ಲು: ವೃದ್ಧೆ ಮೃತ್ಯು
ಬೆಂಗಳೂರು, ಸೆ.13: ವ್ಯಕ್ತಿಯೊಬ್ಬ ತನ್ನ ಪತ್ನಿ ಮೇಲೆ ಕೋಪದಿಂದ ಎಸೆದ ಕಲ್ಲು, ಗುರಿ ತಪ್ಪಿದ ಪರಿಣಾಮ ವೃದ್ಧೆಯೊಬ್ಬರಿಗೆ ತಾಕಿ, ಸಾವನ್ನಪ್ಪಿರುವ ಘಟನೆ ಇಲ್ಲಿನ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಜನತಾ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ಮಿಂಟೊ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಲಲಿತಮ್ಮ ಸಾವನ್ನಪ್ಪಿರುವ ವೃದ್ಧೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಮಂಜುನಾಥ್ ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಗುರುವಾರ ತಡರಾತ್ರಿ ಆರೋಪಿ ಮಂಜುನಾಥ್, ಈತನ ಪತ್ನಿ ಸುನಂದಾ ನಡುವೆ ಹಣದ ವಿಚಾರಕ್ಕಾಗಿ ಮನೆಯಲ್ಲಿ ಜಗಳ ನಡೆದಿದೆ ಎನ್ನಲಾಗಿದೆ.
ನೋಡ ನೋಡುತ್ತಿದ್ದಂತೆ ಗಲಾಟೆ ತಾರಕಕ್ಕೇರಿದ್ದು, ಆಕ್ರೋಶದಿಂದ ಮನೆಯಿಂದ ಹೊರಬಂದ ಮಂಜುನಾಥ್, ಹೆಂಡತಿಗೆ ಸ್ಥಳದಲ್ಲೇ ಇದ್ದ ಕಲ್ಲು ಎತ್ತಿ ಎಸೆದಿದ್ದಾನೆ. ಆದರೆ, ಅಲ್ಲೇ ಕೂತಿದ್ದ ಪಕ್ಕದ ಮನೆಯ ಲಲಿತಮ್ಮಳ ತಲೆಗೆ ಕಲ್ಲು ತಾಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Next Story