ಸೆ.22ರಂದು ರವೀಶ್ ಕುಮಾರ್ಗೆ ‘ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ
ಬೆಂಗಳೂರು, ಸೆ.20: ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಹಿರಿಯ ಪತ್ರಕರ್ತ ರವೀಶ್ ಕುಮಾರ್ಗೆ ‘ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಸೆ.22ರಂದು ನಗರದ ಸೇಂಟ್ ಜೋಸೆಫ್ ಕಾಲೇಜ್ನಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ ಡಿ. ಉಮಾಪತಿಯವರ ‘ದೆಹಲಿ ನೋಟ’ ಮತ್ತು ವಿನಯಾ ಒಕ್ಕುಂದರವರ ‘ನೀರನಡೆ’ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮಾಡಲಿದ್ದಾರೆ.
ಕವಿತಾ ಲಂಕೇಶ್ ‘ಗೌರಿ ಲಂಕೇಶ್ ನ್ಯೂಸ್’ ವೆಬ್ಸೈಟ್ ಹಾಗೂ ಕೆ.ಫಣಿರಾಜ್ ಗೌರಿ ನೆನಪಿನ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಭಾಷಾ ತಜ್ಞ ಗಣೇಶ್ ದೇವಿ, ಗೌರಿ ಲಂಕೇಶ್ ಸ್ಮಾರಕ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ. ಜತೆಗೆ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯಾಗಿ ಇಂದಿಗೆ ಎರಡು ವರ್ಷಗಳಾಗಿದೆ. ಈ ಭೀಕರ ಹತ್ಯೆ ದೇಶ ವಿದೇಶಗಳಲ್ಲಿ ತಲ್ಲಣ ಸೃಷ್ಟಿಸಿತಲ್ಲದೆ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣತೆ, ವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿಯನ್ನು ಯಾವ ಅನುಮಾನವೂ ಇಲ್ಲದಂತೆ ದೃಢೀಕರಿಸಿದೆ. ಗೌರಿ ಹತ್ಯೆಯನ್ನು ಕುರಿತು ವಿಚಾರಣೆ ನಡೆಸಿರುವ ವಿಶೇಷ ತನಿಖಾ ದಳ ಹಿಂದೂ ಮೂಲಭೂತವಾದಿ ಸಂಘಟನೆಯಾದ ಸನಾತನ ಸಂಸ್ಥೆಯ ಜತೆ ನಂಟಿರುವ ಹಲವಾರು ಮಂದಿಯನ್ನು ಆರೋಪಿಗಳನ್ನಾಗಿಸಿದೆ ಎಂದು ತಿಳಿಸಿದರು.
ಅಲ್ಲದೆ, ಇವರಿಗೂ ಪ್ರೊ.ಕಲಬುರ್ಗಿ, ಗೋವಿಂದ ಪನ್ಸಾರೆ ಹಾಗೂ ನರೇಂದ್ರ ದಾಭೋಲ್ಕರ್ ಕೊಲೆಗೂ ಸಂಬಂಧವಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದು ಸೆಕ್ಯುಲರ್ ಹಾಗೂ ವಿಚಾರವಾದದ ಮೇಲೆ ಮೂಲಭೂತವಾದಿಗಳು ನಡೆಸಿರುವ ವ್ಯವಸ್ಥಿತ ಸಂಚು ಎಂದು ತನಿಖೆ ಎತ್ತಿಹಿಡಿದಿದೆ. ದೇಶ ಫ್ಯಾಶಿಸಂ ಕಡೆ ವಾಲುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ಒಂದು ತಾರ್ಕಿಕ ಘಟ್ಟವನ್ನು ಬೇಗ ತಲುಪಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಗೌರಿ ಸ್ಮಾರಕ ಟ್ರಸ್ಟ್ ಈ ಸಂದರ್ಭದಲ್ಲಿ ಒತ್ತಾಯಿಸುತ್ತದೆ ಎಂದರು.
ಪ್ರಭುತ್ವಕ್ಕೆ ಎದುರಾಗಿ ಸತ್ಯವನ್ನು ಸಾರಿ ಹೇಳುವುದರ ಪ್ರಾಮುಖ್ಯತೆಯನ್ನೂ, ಅನಿವಾರ್ಯತೆಯನ್ನೂ ಗೌರಿಯ ದಿನ ಪ್ರತಿನಿಧಿಸುತ್ತದೆ. ಈ ಆಶಯಕ್ಕೆ ಅನುಗುಣವಾಗಿ ಟ್ರಸ್ಟ್ ಗೌರಿ ಲಂಕೇಶ್ ಹೆಸರಿನಲ್ಲಿ ಒಂದು ವಾರ್ಷಿಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದು, ಪತ್ರಿಕೋದ್ಯಮಕ್ಕೆ ಘನತೆ ತರುವಂಥ, ಸಂಕಷ್ಟ ಸಮಯದಲ್ಲೂ ತಮ್ಮ ವೃತ್ತಿಗೆ ಬದ್ಧತೆಯಿಂದ ದುಡಿವ, ನಿರ್ಭಿಡೆಯಿಂದ ವರದಿ ಮಾಡುವ ಪತ್ರಕರ್ತರಿಗೆ ಪ್ರಶಸ್ತಿಯನ್ನು ನೀಡಬೇಕೆಂಬುದು ಟ್ರಸ್ಟಿನ ಆಶಯವಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ಹರಿತವಾದ ಸುದ್ದಿ ವಿಶ್ಲೇಷಣೆಗೆ ಮತ್ತು ರಾಜಿ ಇಲ್ಲದ ಸೆಕ್ಯುಲರ್ ನಿಲುವಿಗೆ ಬದ್ಧರಾಗಿದ್ದಾರಷ್ಟೇ ಅಲ್ಲದೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ವೃತ್ತಿ ಘನತೆಯನ್ನು ಎತ್ತಿಹಿಡಿಯುತ್ತಾ, ಪ್ರಜಾತಾಂತ್ರಿಕ ನಿಲುವಿಗೆ ಅಚಲವಾದ ನಿಷ್ಠೆಯನ್ನು ತೋರುತ್ತಾ ಬಂದಿದ್ದಾರೆ. ಇಂಥವರು ಗೌರಿ ಪ್ರಶಸ್ತಿಯ ಮೊದಲ ಪುರಸ್ಕೃತರು ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ಇನ್ನು, ಪ್ರಶಸ್ತಿಯು ಗೌರವ ಫಲಕ ಮತ್ತು ಒಂದು ಲಕ್ಷ ರೂ.ಗಳ ಸನ್ಮಾನ ಧನವನ್ನು ಒಳಗೊಂಡಿದೆ ಎಂದರು.
ಕಳೆದ ಬಾರಿಯಂತೆ ಈ ಸಾರಿಯೂ ಗೌರಿ ಸ್ಮಾರಕ ಟ್ರಸ್ಟ್ ಗೌರಿ ನೆನಪಿನ ದಿನವನ್ನು ಸಾಂವಿಧಾನಿಕ ಮೌಲ್ಯಗಳಾದ ವಾಕ್ ಸ್ವಾತಂತ್ರ ಮತ್ತು ಭಿನ್ನಮತದ ಹಕ್ಕನ್ನು ಎತ್ತಿಹಿಡಿಯುವ, ತನ್ಮೂಲಕ ಪ್ರಜಾತಂತ್ರವನ್ನು ಪೊರೆಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
-ಕೆ.ಎಲ್.ಅಶೋಕ್, ಗೌರಿ ಸ್ಮಾರಕ ಟ್ರಸ್ಟ್ನ ಕಾರ್ಯದರ್ಶಿ