ನೆರೆ ಪರಿಹಾರದ ಬಗ್ಗೆ ಅಮಿತ್ ಶಾ ಜೊತೆ ಚರ್ಚೆ: ಡಿ.ವಿ.ಸದಾನಂದಗೌಡ
ಬೆಂಗಳೂರು, ಅ.2: ಕೇಂದ್ರ ಸಚಿವ ಸಂಪುಟ ಸಭೆಯು ನಾಳೆ(ಗುರುವಾರ) ನಡೆಯಲಿದ್ದು, ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡುವ ಸಂಬಂಧ ನಾನು ಹಾಗೂ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರದ ಅಧಿಕಾರಿಗಳ ತಂಡಗಳು ರಾಜ್ಯಕ್ಕೆ ಬಂದು ನೆರೆ ಹಾಗೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿ ತೆರಳಿವೆ. ಆದಷ್ಟು ಶೀಘ್ರವೇ ಪರಿಹಾರ ಬಿಡುಗಡೆಯಾಗಲಿದೆ ಎಂದರು.
ಮಳೆ ನಿಲ್ಲದೆ ಮನೆ ಕಟ್ಟಲು ಸಾಧ್ಯವಾಗುತ್ತದೆಯೇ? ಈ ಹಿಂದೆ ಸಮಯಕ್ಕೆ ಸರಿಯಾಗಿ ಪರಿಹಾರದ ಹಣ ಬಿಡುಗಡೆಯಾಗುತ್ತಿರಲಿಲ್ಲ. ಹಣ ತರುವುದು ಕೊಳ್ಳೆ ಹೊಡೆಯುವುದು ಇದೇ ಪ್ರವೃತ್ತಿ ಮುಂದುವರೆಯುತ್ತಿತ್ತು. ಆದರೆ, ಈ ಬಾರಿ ಅದಕ್ಕೆಲ್ಲ ಅವಕಾಶ ಇಲ್ಲ ಎಂದು ಅವರು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಮಾಡಲಿವೆ. ಈಗಾಗಲೇ ಎಸ್ಡಿಆರ್ಎಫ್ ಮೂಲಕ ಪರಿಹಾರ ಬಿಡುಗಡೆ ಮಾಡಲಾಗಿದೆ. ಯಾರು ಸಮಸ್ಯೆಗೆ ಸಿಲುಕಿದ್ದಾರೋ ಅವರಿಗೆ ಪರಿಹಾರ ನೀಡುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡಲಿವೆ ಎಂದು ಸದಾನಂದಗೌಡ ತಿಳಿಸಿದರು.