ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಸಚಿವ ಸಿ.ಟಿ.ರವಿ
ಬೆಂಗಳೂರು, ಅ.3: ಕೇಂದ್ರ ಸರಕಾರ ಯಾವ ರಾಜ್ಯದ ಮೇಲೂ ಹಿಂದಿ ಭಾಷೆಯನ್ನು ಹೇರಿಕೆ ಮಾಡಿಲ್ಲ. ನಾವು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ವಿಚಾರವಾಗಿ ಭಾಷಾ ತಜ್ಞರು, ಸಾಹಿತಿಗಳು, ಮೈಸೂರಿನ ಭಾಷಾ ಸಂಸ್ಥಾನದ ಪ್ರತಿನಿಧಿಗಳು ತಮಿಳು ಶಾಸ್ತ್ರೀಯ ಕೇಂದ್ರದ ನಿರ್ದೇಶಕರು ಮತ್ತು ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಅವರು ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿರು.
ಇವತ್ತು ಯಾವುದೇ ವಿರೋಧವಿಲ್ಲದೆ ಇಂಗ್ಲಿಷ್ ಭಾಷೆಯನ್ನು ಅಂತರ್ರಾಷ್ಟ್ರೀಯ ಭಾಷೆ ಎಂದು ಒಪ್ಪಿಕೊಂಡಿದ್ದೇವೆ. ಹಿಂದಿಯನ್ನು ಸಂಪರ್ಕ ಭಾಷೆಯಾಗಿ, ರಾಷ್ಟ್ರೀಯ ಮಟ್ಟದ ಭಾಷೆಯಾಗಬೇಕು ಎಂದು ಕೇಂದ್ರ ಸರಕಾರ ಹೇಳಿದೆಯೇ ಹೊರತು, ಹಿಂದಿಯನ್ನು ಯಾರ ಮೇಲೂ ಹೇರಿಲ್ಲ ಎಂದು ಅವರು ಹೇಳಿದರು.
ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಹಿಂದಿ ರಾಷ್ಟ್ರೀಯ ಭಾಷೆಯಾಗಬೇಕೆಂದು ಅನುದಾನವನ್ನು ನೀಡಿದ್ದರು. ಕನ್ನಡದ ಮೇಲೆ ತಮಿಳು ಹೇರಬೇಕು ಅಂತಲ್ಲ. ನಾವು ನಮ್ಮತನ ಕಳೆದುಕೊಳ್ಳಬೇಕು ಅಂತಲ್ಲ, ಭೌಗೋಳಿಕವಾಗಿ ಸಂಪರ್ಕ ಭಾಷೆಗಳು ಬೆಳೆಯಬೇಕು ಎಂದು ರವಿ ತಿಳಿಸಿದರು.
ಮಾನಸಿಕ ಹಿಂಜರಿಕೆಯಿಂದ ಹಿಂದಿ ಕಲಿಕೆ ಬೇಡ ಅನ್ನೋದು ಸರಿ ಅಲ್ಲ. ಒಂದು ಭೌಗೋಳಿಕ ಭಾಷೆಯಾಗಿ ಹಿಂದಿ ಕಲಿತರು ತಪ್ಪಲ್ಲ, ಇಂಗ್ಲಿಷ್ ಕಲಿತರು ತಪ್ಪಲ್ಲ. ಆದರೆ, ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದರೆ ನಾವು ಕೂಡ ಒಪ್ಪುವುದಿಲ್ಲ ಎಂದು ಅವರು ಹೇಳಿದರು.
ಮಾತೃ ಭಾಷೆ ಕನ್ನಡವನ್ನು ಉಳಿಸಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನೆಲ್ಲ ನಮ್ಮ ಸರಕಾರ ಮಾಡಲಿದೆ. ಪ್ರತಿಯೊಂದು ಮನೆಯಲ್ಲಿಯೂ ಬಂಡಾಯ ಇದ್ದೇ ಇರುತ್ತದೆ. ಅದೇ ರೀತಿ ಕನ್ನಡದ ವಿಚಾರದಲ್ಲೂ ಬಂಡಾಯವಿದೆ. ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಹಿಂದಿನ ಸರಕಾರವು ಇಂಗ್ಲಿಷ್ ಮಾಧ್ಯಮ ಪಬ್ಲಿಕ್ ಶಾಲೆಗಳನ್ನು ತೆರೆದಿದೆ ಎಂದು ರವಿ ತಿಳಿಸಿದರು.
11 ವರ್ಷಗಳಾದರೂ ಕನ್ನಡ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರವು ಬಾಲಗ್ರಹದಿಂದ ಮುಕ್ತವಾಗದಿರುವ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಈಗ ಸರಕಾರವು ತುರ್ತಾಗಿ ನವೆಂಬರ್ 1ರ ಒಳಗಾಗಿ ಆಗಬೇಕಾಗಿರುವ ಕೆಲಸಗಳನ್ನು ಮಾಡಿ ಅಗತ್ಯ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಪ್ರಸ್ತಾಪವಾದ ಅಂಶಗಳು: 2011ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ’ದ ಉದ್ಘಾಟನೆಯಾಗಿ, ಸಿಐಐಎಲ್ನ ಒಂದು ಉಪ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ, ಶಾಸ್ತ್ರೀಯ ಭಾಷೆಗೆ ಕೇಂದ್ರ ಸರಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಅರ್ಥಪೂರ್ಣವಾದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಸರಕಾರವು ಕೇಂದ್ರಕ್ಕೆ ತಾತ್ಕಾಲಿಕ ಕಟ್ಟಡ ಒದಗಿಸಿದ 15 ದಿನಗಳಲ್ಲಿ ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರವನ್ನು ಮೈಸೂರಿನ ಸಿಐಐಎಲ್ನಿಂದ ಬೆಂಗಳೂರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ಕೇಂದ್ರಕ್ಕೆ ಸ್ವಾಯತ್ತತೆ ನೀಡುವುದಾಗಿ ಅಂದಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಭರವಸೆ ನೀಡಿದ್ದರು.
ತಮಿಳು ಶಾಸ್ತ್ರೀಯ ಅತ್ಯುನ್ನತ ಕೇಂದ್ರವು ಸಿಐಐಎಲ್ನಿಂದ ಬೇರೆಯಾದ ನಂತರ ಸ್ವಾಯತ್ತ ಸಂಸ್ಥೆಯಾಗಿ ಚೆನ್ನೈನಲ್ಲಿ 17 ಎಕರೆ ವಿಶಾಲ ಪ್ರದೇಶದಲ್ಲಿ 76 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ ಕಟ್ಟಡದಲ್ಲಿ ಮೌಲೀಕವಾದ ಕೆಲಸಗಳನ್ನು ಮಾಡುತ್ತಿದೆ. ಈ ಕೇಂದ್ರವು ಕನ್ನಡಕ್ಕೆ ತಂದಿರುವ ‘ತಿರುಕ್ಕುರಳ್’, ‘ತೊಲ್ಕಾಪಿಯಂ’ ಅನುವಾದಗಳ ಗುಣಮಟ್ಟದ ಅನುವಾದ ಮತ್ತು ಮುದ್ರಣವಾಗಿದೆ. ರಾಜ್ಯ ಸರಕಾರ ಕನ್ನಡ ಶಾಸ್ತ್ರೀಯ ಕೇಂದ್ರಕ್ಕೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಕ್ವಾರ್ಟರ್ಸ್ ಕಟ್ಟಡವನ್ನು ನೀಡಿದೆ. ಈ ಕೇಂದ್ರವು ಸಮರ್ಪಕವಾಗಿ ಕೆಲಸ ಮಾಡಲು ಸ್ವಾಯತ್ತತೆಯ ಅಗತ್ಯವಿದೆ. ಜೊತೆಗೆ ಕೇಂದ್ರ ಸರಕಾರವೂ ಸೂಕ್ತ ಸಿಬ್ಬಂದಿ, ಮೂಲಭೂತ ಅಗತ್ಯವನ್ನು ನೀಡಬೇಕು. ಅಲ್ಲದೆ, ಆಡಳಿತ ಮಂಡಳಿ, ಹಣಕಾಸು ಸಮಿತಿ, ಪಂಡಿತ ಮಂಡಳಿ ರಚನೆಯನ್ನು ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
ಶಾಸ್ತ್ರೀಯ ತಮಿಳಿಗೆ ಕೆಲಸ ಮಾಡಿದವರಿಗೆ ರಾಷ್ಟ್ರಪತಿಗಳು ನೀಡುತ್ತಿರುವ ಪ್ರಶಸ್ತಿಗಳಿಗೆ ತೊಲ್ಕಾಪಿಯಾರ್ ಪ್ರಶಸ್ತಿ ಹಾಗೂ ಕುರಲ್ಪೀದಂ ಪ್ರಶಸ್ತಿ ಎಂದು ಹೆಸರಿಸಲಾಗಿದೆ. ಅದೇ ಮಾದರಿಯಲ್ಲಿ ಕನ್ನಡದಲ್ಲೂ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು ಒತ್ತಾಯಿಸಿದರು.
ಸಭೆಯಲ್ಲಿ ಕನ್ನಡ ಅಭಿವದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ಇನ್ನಿತರ ಸಾಹಿತಿಗಳು, ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.