ನೆರೆ ಪರಿಹಾರಕ್ಕೆ ನೋಡಲ್ ಕಚೇರಿ ಆರಂಭಿಸಿ: ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು, ಅ. 11: ರಾಜ್ಯದಲ್ಲಿನ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಸರಕಾರ ಕೂಡಲೇ ನೋಡಲ್ ಕಚೇರಿ ಆರಂಭಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೆರೆಗೆ ಕೇಂದ್ರ ಸರಕಾರ ಕಡಿಮೆ ಪರಿಹಾರ ಮೊತ್ತ ನೀಡಿದೆ ಎಂದು ನಾನು ಆರೋಪಿಸುವುದಿಲ್ಲ. ನಿಯಮಾವಳಿ ಪ್ರಕಾರವೇ ಹಣ ಕೊಟ್ಟಿದೆ. ರಾಜ್ಯದಿಂದಲೇ ಸಂತ್ರಸ್ತರಿಗೆ ನೆರವು ನೀಡಿ ಎಂದು ಆಗ್ರಹಿಸಿದರು.
ಬಜೆಟ್ನಲ್ಲಿನ ಘೋಷಿತ ಬೇರೆ ಯೋಜನೆಗಳ ಹಣವನ್ನು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಬಳಸಿಕೊಳ್ಳಿ. ನೆರೆ ಪರಿಹಾರ ಸಂಬಂಧ ವಿಪಕ್ಷಗಳ ಸಭೆ ಕರೆಯಿರಿ, ನಮ್ಮ ಸಲಹೆಗಳನ್ನು ಸ್ಪೀಕರಿಸಿ. ಟೀಕೆಗಳಿಂದ ಜನರಿಗೆ ಪ್ರಯೋಜನ ಆಗುವುದಿಲ್ಲ ಎಂದರು.
ಕೊಡಗು ಜಿಲ್ಲೆಯಲ್ಲಿ ನೆರೆ ಬಂದ ಸಂದರ್ಭದಲ್ಲಿ ಸರಕಾರ ಮನೆ ನಿರ್ಮಾಣಕ್ಕೆ 10 ಲಕ್ಷ ರೂ.ವೆಚ್ಚ ಮಾಡಿದ್ದು, ಅದೇ ಮಾದರಿಯಲ್ಲೆ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು 10 ಲಕ್ಷ ರೂ.ನೆರವು ನೀಡಿ ಎಂದು ಆಗ್ರಹಿಸಿದ ಅವರು, ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.