ಅನ್ನಭಾಗ್ಯ ಯೋಜನೆ, ಚಿಟ್ ಫಂಡ್ ಹೆಸರಿನಲ್ಲಿ 2 ಸಾವಿರ ಕೋಟಿ ರೂ. ವಂಚನೆ: ಆರೋಪ
ಬೆಂಗಳೂರು, ಅ.11: ಅನ್ನಭಾಗ್ಯ ಯೋಜನೆಗೆ ಅಕ್ಕಿ ಸರಬರಾಜು ಹಾಗೂ ಚಿಟ್ಫಂಡ್ ಹೆಸರಿನಲ್ಲಿ ಸಾವಿರಾರು ಜನರಿಗೆ ಷಣ್ಮುಗಂ ಮಾಡರ್ನ್ ರೈಸ್ ಮಾಲಕ ಷಣ್ಮುಗಂ ಅವರು 2 ಸಾವಿರ ಕೋಟಿ ರೂ. ವಂಚಿಸಿದ್ದಾರೆ ಎಂದು ನ್ಯಾಷನಲ್ ಮರ್ಚೆಂಟ್ಸ್ ವೆಲ್ಫೇರ್ ಫೋರಂ ಸದಸ್ಯರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಸದಸ್ಯ ಪ್ರಸನ್ನ ಕುಮಾರ್, ಚಿಟ್ಫಂಡ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅನ್ನಭಾಗ್ಯ ಯೋಜನೆಗೆ ಈ ಹಣ ಬಳಕೆ ಮಾಡಿದ್ದಾರೆ. ಸಾರ್ವಜನಿಕರಿಗೆ ಹಣ ಹಿಂದಿರುಗಿಸದೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಗರಣದಲ್ಲಿ ಪೊಲೀಸರು, ರಾಜಕಾರಣಿಗಳು ಶಾಮೀಲಾಗಿರುವುದರಿಂದ ಎಷ್ಟೇ ದೂರು ನೀಡಿದರು ಪೊಲೀಸರು ತನಿಖೆ ನಡೆಸುತ್ತಿಲ್ಲ. ಕೂಡಲೇ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಈ ಪ್ರಕರಣವನ್ನು ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಹೂಡಿಕೆದಾರರು ಹಣ ಕೇಳಲು ಹೋದರೆ ಷಣ್ಮುಗಂ ಅವರು ಅನ್ನಭಾಗ್ಯ ಯೋಜನೆಯಿಂದ ಹಣ ಬಂದಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ. ಷಣ್ಮುಗಂ ಬೇನಾಮಿ ಹೆಸರಿನಲ್ಲಿ ಹಲವಾರು ಕೋಟಿ ಆಸ್ತಿ ಹೊಂದಿದ್ದು, ಸರಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ತನಿಖೆಗೊಳಪಡಿಸಿದರೆ ಬೇನಾಮಿ ಆಸ್ತಿಗಳು ಪತ್ತೆಯಾಗಲಿವೆ ಎಂದು ಹೇಳಿದರು.