ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ: ಡಾ.ಸನಾವುಲ್ಲಾ ಷರೀಪ್ಗೆ ಪುರಸ್ಕಾರ
ಬೆಂಗಳೂರು, ಅ.12: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಾ.ಎಂ.ಡಿ.ಸನಾವುಲ್ಲಾ ಷರೀಫ್ ಅವರಿಗೆ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಚಾಮರಾಜಪೇಟೆಯ ಜೆಜೆಆರ್ನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಖ್ಯ ಉಪನ್ಯಾಸಕರಾಗಿದ್ದ ಸನಾವುಲ್ಲಾ ಷರೀಫ್ ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಸಮಾರಂಭ ಆಯೋಜಿಸಿ ಗೌರವ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಇಮ್ರಾನ್ ಪಾಷ ಅವರು, ಸನಾವುಲ್ಲಾ ಚಾಮರಾಜಪೇಟೆ ಭಾಗದಲ್ಲಿ ಬಡವ, ಶ್ರೀಮಂತ ಹಾಗೂ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ಸಮಾಜದವರಿಗೂ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯದೊಂದಿಗೆ ದೊಡ್ಡ ವ್ಯಕ್ತಿತ್ವ ಪಡೆಯುವಂತೆ ಮಾಡಿದ್ದಾರೆ ಎಂದು ಹೇಳಿದರು.
ಈ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವರಿಗೆ ಎಲ್ಲಿಲ್ಲದ ಪ್ರೀತಿ ಇದೆ. ಸನಾವುಲ್ಲಾ ಅವರ ಸೇವೆ ಮತ್ತು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ರೀತಿಯ ಬಗ್ಗೆ ಕಾಳಜಿಯಿದೆ. ಅವರಿಗೆ ಗೌರವ ಸಲ್ಲಿಸಿರುವುದು ಶ್ಲಾಘನೀಯ. ಇಂತಹ ಹಿರಿಯರನ್ನು ಗೌರವಿಸುವುದು ಶಿಕ್ಷಕ ಸಮುದಾಯಕ್ಕೆ ಸಲ್ಲಿಸುವ ಗೌರವವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರಮೇಶ್ ಹಾಗೂ ಸಿಬ್ಬಂದಿಯಾದ ಶಫಿ, ಝಕುಲ್ಲಾ ಷರೀಪ್, ಬಿಬಿಎಂಪಿ ಕಾಲೇಜಿನ ಪ್ರಾಂಶುಪಾಲ ಶಿವಶಂಕರ್, ಪ್ರಾದೇಶಿಕ ಆಯುಕ್ತ ಕ್ವಾಝಿ ಸೇರಿದಂತೆ ಹಲವರಿದ್ದರು.