ಬೆಂಗಳೂರು: ಅಲಯನ್ಸ್ ವಿವಿಯ ಮಾಜಿ ಕುಲಪತಿ ಡಾ.ಅಯ್ಯಪ್ಪ ದೊರೆ ಹತ್ಯೆ
ಅಯ್ಯಪ್ಪ ದೊರೆ
ಬೆಂಗಳೂರು, ಅ.16: ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಅಯ್ಯಪ್ಪ ದೊರೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ(ಅ.15) ರಾತ್ರಿ ಆರ್ಟಿ ನಗರದ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರ್ಟಿ ನಗರದಲ್ಲಿರುವ ಮನೆಯ ಪಕ್ಕದ ರಸ್ತೆಯಲ್ಲಿ ರಾತ್ರಿ 11.30ರ ವೇಳೆ ವಾಯುವಿಹಾರ ನಡೆಸುತ್ತಿದ್ದ ಡಾ.ಅಯ್ಯಪ್ಪ ದೊರೆ(53)ಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರು ಗ್ರಾಮದ ಡಾ. ಅಯ್ಯಪ್ಪ ದೊರೆ ಶಿಕ್ಷಣ ತಜ್ಞರಾಗಿದ್ದು, ನಾಲ್ಕು ವರ್ಷ ನಗರದ ಆನೇಕಲ್ ಬಳಿಯ ಅಲಯನ್ಸ್ ವಿವಿಯಲ್ಲಿ ಉಪಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ನ್ಯಾಯಾಲಯದಲ್ಲಿ ಆಲಯನ್ಸ್ ವಿಶ್ವವಿದ್ಯಾಲಯದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ನಡೆಯುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಯ್ಯಪ್ಪ ದೊರೆ ಅವರ ಪತ್ನಿಯಿಂದ ಹೆಚ್ಚಿನ ಮಹಿತಿಗಳನ್ನು ಪಡೆದಿದ್ದೇವೆ. ಆರೋಪಿಗಳ ಪತ್ತೆಗೆ ಈಗಾಗಲೇ ತನಿಖಾ ತಂಡ ರಚನೆಯಾಗಿದೆ ಎಂದು ಡಿಸಿಪಿ ಶಶಿಕುಮಾರ್ ಮಾಹಿತಿ ನೀಡಿದರು.
ಆಲಯನ್ಸ್ ವಿವಿಯಲ್ಲಿ ಹಲವು ವ್ಯಾಜ್ಯಗಳಿದ್ದವು ಎಂಬುದು ಗಮನಕ್ಕೆ ಬಂದಿದೆ. ಈ ಕಾರಣಕ್ಕಾಗಿಯೇ ಹತ್ಯೆ ನಡೆದಿರಬಹುದು. ಈ ಸಂಬಂಧ ದುಷ್ಕರ್ಮಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಿದ್ದೇವೆ. ಆ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ