ಐಎಂಎ ವಂಚನೆ ಪ್ರಕರಣ: ತನಿಖೆಗೆ ಅನುಮತಿ ನೀಡದ ಬಗ್ಗೆ ವಿವರಣೆ ನೀಡಿ- ಹೈಕೋರ್ಟ್ ಆದೇಶ
ಬೆಂಗಳೂರು, ಅ.18: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಪ್ರಾಸಿಕ್ಯೂಷನ್ಗೆ ಅನುಮತಿ ಸಿಗದ ಬಗ್ಗೆ ಹಾಗೂ ರಾಜ್ಯ ಸರಕಾರದ ಸಕ್ಷಮ ಪ್ರಾಧಿಕಾರ ತನಿಖೆಗೆ ಅನುಮತಿ ನೀಡದಿರುವ ಬಗ್ಗೆ ವಿವರಣೆ ನೀಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಈ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಕರಣದ ಆರೋಪಿಗಳಾದ ಸರಕಾರಿ ಅಧಿಕಾರಿ ವಿಜಯ್ ಶಂಕರ್, ಎಲ್.ಸಿ.ನಾಗರಾಜ್ ತನಿಖೆಗೆ ಇನ್ನೂ ಪ್ರಾಸಿಕ್ಯೂಷನ್ ಅನುಮತಿ ಸಿಕ್ಕಿಲ್ಲ. ರಾಜ್ಯ ಸರಕಾರದ ಸಕ್ಷಮ ಪ್ರಾಧಿಕಾರ ತನಿಖೆಗೆ ಅನುಮತಿ ನೀಡದಿರುವುದರ ಕುರಿತು ಸಿಬಿಐ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಹೈಕೋರ್ಟ್ ಆದೇಶ ಮಾಡಿ ಒಂದು ತಿಂಗಳಾದರೂ ಪ್ರಾಸಿಕ್ಯೂಷನ್ ಇನ್ನೂ ಯಾಕೆ ಅನುಮತಿ ನೀಡಿಲ್ಲ ಎಂಬುದರ ಕುರಿತು ವಿವರಣೆ ನೀಡಬೇಕೆಂದು ಪೀಠಕ್ಕೆ ತಿಳಿಸಿ, ವಿಚಾರಣೆಯನ್ನು ಮುಂದೂಡಿತು.