ಕೈ ಅಲ್ಲ, ಎದೆ ಬಗಿದರೂ ನಾನು ನನ್ನ ಜನರಿಗೆ ಬದ್ಧನಾಗಿದ್ದೇನೆ: ಅನರ್ಹ ಶಾಸಕ ಡಾ.ಸುಧಾಕರ್
ಬೆಂಗಳೂರು, ಅ. 20: ‘ನನ್ನ ಕೈ ಅಲ್ಲ, ನನ್ನ ಎದೆ ಬಗಿದರೂ, ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕು ರಚನೆಯ ವಿಷಯದಲ್ಲಿ ನಾನು ನನ್ನ ಜನರಿಗೆ ಬದ್ದನಾಗಿದ್ದೇನೆ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಇಂದಿಲ್ಲಿ ಮಾಜಿ ಸಚಿವ ಶಿವಶಂಕರ್ ರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
‘ಮಹಾತ್ಮಾ ಗಾಂಧಿಜೀ ಅವರ 150ನೆ ಜನ್ಮವರ್ಷ ಆಚರಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಮಾಜಿ ಸಚಿವ ಶಿವಶಂಕರ ರೆಡ್ಡಿ ಅವರ ಮೇಲೆ ಕ್ರಮ ಜರುಗಿಸಲಿ’ ಎಂದು ಸುಧಾಕರ್ ಟ್ವಿಟ್ಟರ್ ಮೂಲಕ ಆಗ್ರಹಿಸಿದ್ದಾರೆ.
‘ಇಂದು ಇಡೀ ಜಗತ್ತಿಗೆ ಶಿವಶಂಕರ ರೆಡ್ಡಿ ಅವರ ಗೂಂಡಾ ಮನಸ್ಥಿತಿಯ ಪರಿಚಯವಾಗಿದೆ. ಸಮಾಜಕ್ಕೆ ಮಾದರಿಯಾಗಬೇಕಾದ ರಾಜಕಾರಣಿಗಳು ಇಂತಹ ಕೀಳುಮಟ್ಟಕೆ ಇಳಿದಿರುವುದು ದುರ್ದೈವ’ ಎಂದು ಡಾ.ಕೆ.ಸುಧಾಕರ್ ಟ್ವಿಟ್ಟರ್ನಲ್ಲಿ ಟೀಕಿಸಿದ್ದಾರೆ.
‘ಗೌರಿಬಿದನೂರು ಕ್ಷೇತ್ರದ ತೊಂಡೆಬಾವಿ ಹೋಬಳಿಯನ್ನು ನೂತನ ತಾಲೂಕು ಮಂಚೇನಹಳ್ಳಿ ಸೇರಿಸಲು ಮುಂದಾದರೆ ಕೈ ಕತ್ತರಿಸುತ್ತೇನೆ. ಇದನ್ನು ಯಾವುದೇ ಕಾರಣಕ್ಕೂ ನಾನು ಸಹಿಸುವುದಿಲ್ಲ’ ಎಂದು ಮಾಜಿ ಸಚಿವ ಶಿವಶಂಕರ ರೆಡ್ಡಿ, ಡಾ. ಸುಧಾಕರ್ಗೆ ಎಚ್ಚರಿಕೆ ನೀಡಿದ್ದರು.