ಕುಟಂಬದ ಹೆಸರಿನಲ್ಲಿ ವಂಚನೆ ಆರೋಪ: ದೂರು ನೀಡಿದ ಮಾಜಿ ಶಾಸಕನ ಪತ್ನಿ
ಬೆಂಗಳೂರು, ನ.2: ತಮ್ಮ ಕುಟುಂಬದ ಹೆಸರನ್ನು ಹೇಳಿಕೊಂಡು, ಕೆಲವರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾ ದೇವರಾಜ್ ಇಲ್ಲಿನ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ನಗರದ ಬಸವನಗುಡಿ ವ್ಯಾಪ್ತಿಯಲ್ಲಿ ಕ್ಲಿನಿಕ್ಯೊಂದನ್ನು ನಡೆಸುತ್ತಿರುವ ಶ್ರೀದೇವಿ ಮತ್ತು ಇವರ ಪತಿ ಸದಾಶಿವ ಎಂಬುವವರು ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಮತಾ ದೇವರಾಜ್ ನನಗೆ ಪರಿಚಯಸ್ಥರು ಎಂದು ಹೇಳಿಕೊಂಡು ಶ್ರೀದೇವಿ ಹಾಗೂ ಸದಾಶಿವ ಸಾರ್ವಜನಿಕರ ಬಳಿ ಲಕ್ಷಾಂತರ ಸಾಲ ಪಡೆದಿದ್ದರು. ಅದಲ್ಲದೆ, ಮಮತಾ ದೇವರಾಜ್ ಬಳಿಯೂ ಮಗಳ ಮದುವೆ, ಅನಾರೋಗ್ಯ ವಿಚಾರ ಹೀಗೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ 85 ಲಕ್ಷ ರೂ. ಹಾಗೂ 40 ಲಕ್ಷ ರೂ. ಮೌಲ್ಯದ ಒಡವೆ ಪಡೆದುಕೊಂಡಿದ್ದಾರೆ. ಬಳಿಕ, ನಕಲಿ ಚೆಕ್ ನೀಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ದಂಪತಿ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.