ದಿವ್ಯಾಂಗರ ವಾಹನ ವಿತರಣೆಯಲ್ಲಿ ಅವ್ಯವಹಾರ ಆರೋಪ: ಎಸಿಬಿಗೆ ದೂರು
ಬೆಂಗಳೂರು, ನ.12: ದಿವ್ಯಾಂಗ ಅಭ್ಯರ್ಥಿಗಳಿಗೆ ವಿತರಿಸುವ ತ್ರಿಚಕ್ರ ವಾಹನದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಸದಸ್ಯರು ಎಸಿಬಿಗೆ ದೂರು ಸಲ್ಲಿಸಿದ್ದಾರೆ.
ಬಿಬಿಎಂಪಿ ಪಶ್ಚಿಮ ವಲಯದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ತ್ರಿಚಕ್ರ ವಾಹನ ವಿತರಣೆಯಲ್ಲಿ 3 ಕೋಟಿ ಅವ್ಯವಹಾರ ನಡೆದಿದ್ದು, ಬಿಬಿಎಂಪಿ ಪಶ್ವಿಮ ವಿಭಾಗದ ಜಂಟಿ ಆಯುಕ್ತ ಚಿದಾನಂದ್ ಹಾಗೂ ಕಲ್ಯಾಣಾಧಿಕಾರಿ ಟಿ. ಲಲಿತಾ ಹಾಗೂ ವಿಜಯ ರಾಜ, ಅರುಣ್, ಚಂದ್ರು ಎಂಬುವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ವೇದಿಕೆ ಸದಸ್ಯರು ಆರೋಪಿದ್ದಾರೆ.
2016 ನಿಂದ ಹಿಡಿದು 19ನೇ ಸಾಲಿನಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಸ್ವಾವಲಂಬಿಯಾಗಿ ಬದುಕಲು ಬಿಬಿಎಂಪಿಯಿಂದ ಹಲವಾರು ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ಈ ಪೈಕಿ 221 ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳು ಮಂಜೂರಾಗಿದ್ದವು. ಆದರೆ, ನಿಜವಾದ ಫಲಾನುಭವಿಗಳಿಗೆ ನೀಡದೆ, ಅನರ್ಹರಿಗೆ ಹಂಚಿಕೆ ಮಾಡಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಹಾಗಾಗಿ, ಎಸಿಬಿ ತನಿಖಾಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡರು ತನಿಖೆ ನಡೆಸುವಂತೆ ದೂರುದಾರರು ಒತ್ತಾಯ ಮಾಡಿದ್ದಾರೆ.