ಅಂಬೇಡ್ಕರ್ಗೆ ಅಪಮಾನ ಸಹಿಸಲು ಸಾಧ್ಯವಿಲ್ಲ: ದಸಂಸ
ಬೆಂಗಳೂರು, ನ. 15: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪದೇ ಪದೇ ಅಪಮಾನ ಹಾಗೂ ದಲಿತ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಬಿಜೆಪಿ ಸರಕಾರದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಿಡಿಕಾರಿದೆ.
ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ಸುತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಕೂಡಲೇ ಅಮಾನತು ಮಾಡಬೇಕು. ಈ ಘಟನೆ ಹೊಣೆ ಹೊತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ದಸಂಸ ಆಗ್ರಹಿಸಿದೆ.
‘ನ.26ರ ಸಂವಿಧಾನ ದಿನ’ ಆಚರಣೆ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಮೂರು ವರ್ಷಗಳಿಂದ ಸಿಎಂಸಿಎ ಸಂಸ್ಥೆ ಸಿದ್ದಪಡಿಸಿರುವ ಕೈಪಿಡಿಯನ್ನು ನೀಡಿದ್ದು, ಅದರಲ್ಲಿನ ಲೋಪ ಯಾರೊಬ್ಬರ ಗಮನಕ್ಕೂ ಬಂದಿಲ್ಲ. ಇದೀಗ ಬಹಿರಂಗವಾಗಿದ್ದು, ಕೂಡಲೇ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯ ಮಾಡಲಾಗಿದೆ.
ನಿನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆ, ಇಂದು ನವ ಬೆಂಗಳೂರು ಫೌಂಡೇಷನ್, ನಾಳೆ ಮತ್ತೊಬ್ಬರು.. ಹೀಗೆ ಅಂಬೇಡ್ಕರ್ಗೆ ನಿರಂತರ ಅಪಮಾನ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಸರಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಮಿತಿ ಮುಖಂಡ ಮಂಜುನಾಥ್ ಅಣ್ಣಯ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.