ಟೈಡಾಲ್ ಮಾತ್ರೆ ಸೇವಿಸಿ ಮೃತಪಟ್ಟ ಪ್ರಕರಣ: ಮೆಡಿಕಲ್ ಮಾಲಕನ ಬಂಧನ
ಬೆಂಗಳೂರು, ನ.22: ಟೈಡಾಲ್ ಮಾತ್ರೆಯನ್ನು ಸಿರಂಜ್ ಮೂಲಕ ದೇಹಕ್ಕೆ ಸೇರಿಸಿಕೊಂಡು ಇಬ್ಬರು ಯುವಕರು ಮೃತಪಟ್ಟ ಪ್ರಕರಣ ಸಂಬಂಧ ಮೆಡಿಕಲ್ ಶಾಪ್ ಮಾಲಕನನ್ನು ಇಲ್ಲಿನ ವೈಯಾಲಿಕಾವಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಮನ್ದೀಪ್ ಫಾರ್ಮಾ ಮೆಡಿಕಲ್ ಸ್ಟೋರ್ನ ಮಾಲಕ ಮನೀಷ್ ಕುಮಾರ್(36) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಖಾಸಗಿ ಆಸ್ಪತ್ರೆಯ ಸಿಗ್ನಲ್ ಬಳಿ ಮನ್ದೀಪ್ ಫಾರ್ಮಾ ನಡೆಸುತ್ತಿದ್ದ ಆರೋಪಿ, ಕಾನೂನು ಬಾಹಿರವಾಗಿ ಅಧಿಕ ಪ್ರಮಾಣದಲ್ಲಿ ಟೈಡಾಲ್ ಮಾತ್ರೆಗಳನ್ನು ಖರೀದಿಸಿ ಮಾರಾಟ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟೈಡಾಲ್ ಮಾತ್ರೆಯನ್ನು ಪುಡಿ ಮಾಡಿಕೊಂಡು ಡಿಸ್ಟಲ್ ವಾಟರ್ಗೆ ಸೇರಿಸಿ ಸಿರಂಜ್ಗೆ ತುಂಬಿಸಿಕೊಂಡು ನಶೆ ಬರುವ ಕಾರಣಕ್ಕೆ ಚುಚ್ಚಿಕೊಂಡಿದ್ದ ಕೋದಂಡರಾಮಪುರದ ಅಭಿಲಾಷ್ ಹಾಗೂ ಗೋಪಿ ಮೃತಪಟ್ಟಿದ್ದರು. ಅವರ ಜತೆ ಔಷಧಿ ಚುಚ್ಚಿಕೊಂಡಿದ್ದ ಸುಹಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡಿದ್ದು, ಆತ ವಿಚಾರಣೆಯಲ್ಲಿ ನಶೆ (ಮತ್ತು) ಬರಿಸಿಕೊಳ್ಳಲು ಟೈಡಾಲ್ ಮಾತ್ರೆಯನ್ನು ಖರೀದಿಸಿರುವುದನ್ನು ಬಾಯಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.