ಗೂಂಡಾ ಕಾಯ್ದೆಯಡಿ ಇಬ್ಬರ ಬಂಧನ
ಬೆಂಗಳೂರು, ನ.22: ರಾಜಧಾನಿ ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿರುವ ಪೊಲೀಸರು, ಇಬ್ಬರು ಯುವಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಮಡಿಯಾಳನ್, ಸಂತೋಷ ಯಾನೆ ಹೇಮಂತ್ ಕುಮಾರ್ ಬಂಧಿತ ಆರೋಪಿಗಳೆಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪಟ್ಟಿಯಲ್ಲಿರುವ ಮಡಿಯಾಳನ್, ತನ್ನ ಅಪ್ರಾಪ್ತ ವಯಸ್ಸಿನಲ್ಲಿ ರೌಡಿಯಾಗಿರುವ ಸಂತೋಷ್ನೊಂದಿಗೆ ಸೇರಿಕೊಂಡು ಅಪರಾಧ ಕೃತ್ಯವೆಸಗಿದ್ದನು. ಈತನ ಮೇಲೆ ಕೊಲೆ, ಹಲ್ಲೆ, ದೊಂಬಿ ಇನ್ನಿತರೆ ಗಂಭೀರ ಪ್ರಕರಣದ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ ಎಸ್.ಆರ್. ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿಯಾದ ಸಂತೋಷ್, 2010ರ ನಂತರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು, ಕೊಲೆ ಪ್ರಯತ್ನ, ಸುಲಿಗೆ, ದೊಂಬಿ ಮುಂತಾದ ಕೃತ್ಯದಲ್ಲಿ ತೊಡಗಿಸಿಕೊಂಡ ಪರಿಣಾಮ ಸುಮಾರು 16 ಪ್ರಕರಣ ಈತನ ಮೇಲಿದೆ ಎಂದು ತಿಳಿದುಬಂದಿದೆ.