ಕೊಲೆ ಆರೋಪಿಗಳಿಗೆ ಗುಂಡೇಟು, ಬಂಧನ
ಬೆಂಗಳೂರು, ನ.24: ಯುವಕನ ಮೇಲೆ ದಾಳಿ ನಡೆಸಿ, ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪದಡಿ ಇಬ್ಬರು ಯುವಕರ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿಗಳಾದ ಚಂದನ್ ಮತ್ತು ರೋಹಿತ್ ಬಂಧಿತ ಆರೋಪಿಗಳಾಗಿದ್ದು, ಸದ್ಯ ಪೊಲೀಸರ ಗುಂಡೇಟಿನಿಂದ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನ.21ರಂದು ಉಮಾ ಮಹೇಶ್ವರ್ ಎಂಬ ವಿದ್ಯಾರ್ಥಿ ಕೊಲೆ ಪ್ರಕರಣದ ಸಂಬಂಧ ಖಚಿತ ಮಾಹಿತಿ ಪಡೆದ ನಂದಿನಿ ಲೇಔಟ್ ಇನ್ಸ್ಪೆಕ್ಟರ್ ಲೋಹಿತ್ ಆರೋಪಿಗಳ ಬಂಧನಕ್ಕೆ ತೆರಳಿದಾಗ ಪೋಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಲೋಹಿತ್ ತಮ್ಮ ಆತ್ಮರಕ್ಷಣೆಗಾಗಿ ತಮ್ಮ ಪಿಸ್ತೂಲಿನಿಂದ ಒಂದು ಸುತ್ತು ಗುಂಡು ಗಾಳಿಯಲ್ಲಿ ಹೊಡೆದು, ಶರಣಾಗುವಂತೆ ಎಚ್ಚರಿಕೆ ನೀಡಿದರೂ, ಆರೋಪಿಗಳು ಹಲ್ಲೆಗೆ ಮುಂದಾದ ವೇಳೆ, ಇಬ್ಬರ ಕಾಲುಗಳಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಪಿಎಸ್ಸೈ ನಿತ್ಯಾನಂದ ಹಾಗೂ ಪೇದೆ ಬಸವಣ್ಣ ಅವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.