ಕೆಎಸ್ಸಾರ್ಟಿಸಿ: 'ಬಾಟೆಲ್ ಸೆಲ್ಫೀ' ಅಭಿಯಾನದ ವಿಜೇತರ ಪಟ್ಟಿ ಪ್ರಕಟ
ಬೆಂಗಳೂರು, ನ.24: ಪ್ಲಾಸ್ಟಿಕ್ ಬಾಟಲಿ ಬದಲಿಗೆ ಪರ್ಯಾಯ ಬಾಟೆಲ್ ಬಳಸುವಂತೆ ಕೆಎಸ್ಸಾರ್ಟಿಸಿ ಹಮ್ಮಿಕೊಂಡಿದ್ದ ನೀರಿನ ಬಾಟೆಲ್ನೊಂದಿಗೆ ಸೆಲ್ಫೀ ಅಭಿಯಾನದಲ್ಲಿ ವಿತೇಜರಾದವರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಹಿಂದೆ ಕೆಎಸ್ಸಾರ್ಟಿಸಿಯ ಬಸ್ಗಳಲ್ಲಿ ನೀರಿನ ಬಾಟೆಲ್ ಅನ್ನು ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. ಅನಂತರ ಕೆಎಸ್ಸಾರ್ಟಿಸಿಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಸುವ ಸಲುವಾಗಿ ಪ್ಲಾಸ್ಟಿಕ್ ನೀರಿನ ಬಾಟೆಲ್ಗಳ ವಿತರಣೆಯನ್ನು ನಿಲ್ಲಿಸಿದ್ದರು. ಇದೇ ವೇಳೆ ಪರ್ಯಾಯ ನೀರಿನ ಬಾಟೆಲ್ ಉತ್ತೇಜಿಸಲು ಈ ಅಭಿಯಾನ ನಡೆಸಲಾಗಿತ್ತು.
ಪರಿಸರ ಕಾಳಜಿ ಭಾಗವಾಗಿ ಹವಾನಿನಿಯಂತ್ರಿಕ ಬಸ್ಗಳಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಾಟೆಲ್ಗಳ ಬದಲಿಗೆ, ಲೋಹದ ಬಾಟೆಲ್ ತರುವಂತೆ ಸಂಸ್ಥೆ ಪ್ರಯಾಣಿಕರಿಗೆ ಕರೆ ನೀಡಿತ್ತು. ಇದಕ್ಕೆ ಪ್ರಯಾಣಿಕರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಪ್ರಯಾಣಿಕರು ಪ್ಲಾಸ್ಟಿಕ್ ರಹಿತ ಬಾಟೆಲ್ಗಳನ್ನು ತರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನನ್ನ ಸ್ವಂತ ಬಾಟೆಲ್ನೊಂದಿಗೆ ಸೆಲ್ಫೀ ಸ್ಪರ್ಧೆಯಲ್ಲಿ ಒಂದು ಬಾರಿಗೆ ಉಚಿತ ಪ್ರಯಾಣ ಮಾಡುವ ಅವಕಾಶ ಗೆಲ್ಲಿ ಎನ್ನುವ ಘೋಷಣೆಯೊಂದಿಗೆ ಕೆಎಸ್ಸಾರ್ಟಿಸಿ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ಹಲವರು ಪ್ರಯಾಣದ ವೇಳೆ ತಮ್ಮದೇ ಬಾಟಲ್ನೊಂದಿಗೆ ಸೆಲ್ಫೀ ತೆಗೆದು ಕಳಿಸಿದ್ದಾರೆ. ಅದರಲ್ಲಿ 9 ಜನರನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಗಿದೆ.
ವಿಜೇತರಾದವರು: ಎಂ.ಮಹಾಂತೇಶ್, ಬಾರಿಕ್ಸ್, ಎಸ್.ಸುಧಾಕರನ್, ವೈಷ್ಣವಿ ಜೋಷಿ, ಸಾಗರಿಕಾ ಎಸ್ ಘಾಟ್ಗೆ, ಎಂ.ಕೆ.ಮುರಳಿ, ಪ್ರಿನ್ಸ್ ನಹಾರ್, ಜಿ.ನಾಗರಾಜ್ ವಿಜೇತರಾಗಿದ್ದು, ಇವರು ಕೆಎಸ್ಸಾರ್ಟಿಸಿಯ ಪ್ರತಿಷ್ಠಿತ ಬಸ್ನಲ್ಲಿ ತಮ್ಮ ಆಯ್ಕೆಯ ಯಾವುದಾದರೂ ಒಂದು ಸ್ಥಳಕ್ಕೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.