'ಶರತ್ ಗೆ 120 ಕೋಟಿ ರೂ.ಆಮಿಷ’: ಸೂಕ್ತ ತನಿಖೆಗೆ ಚು.ಆಯೋಗಕ್ಕೆ ಕಾಂಗ್ರೆಸ್ ಆಗ್ರಹ
ಬೆಂಗಳೂರು, ನ.26: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ 120 ಕೋಟಿ ರೂ.ಗಳ ಆಮಿಷವೊಡ್ಡಿದ್ದಾರೆ ಎಂದು ಕೇಳಿ ಬರುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿ ಸೂಕ್ತ ತನಿಖೆಯನ್ನು ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳ ನಾಯಕರ ಮೇಲೆಯೇ ಅತೀ ಹೆಚ್ಚು ದಾಳಿ ಮಾಡುವ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಇದರ ಬಗ್ಗೆ ತನಿಖೆ ಮಾಡಲು ಇರುವ ಅಡ್ಡಿಯಾದರೂ ಏನು ಎಂದು ಪ್ರಶ್ನಿಸಿದೆ.
ಜನತೆಯ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ದ್ರೋಹ ಬಗೆದು ಆಪರೇಷನ್ ಕಮಲದಿಂದ ತಮ್ಮನ್ನು ತಾವು ಮಾರಿಕೊಂಡ ಅನರ್ಹರನ್ನು ಜನರು ಪ್ರಶ್ನಿಸುತ್ತಿದ್ದಾರೆ, ಜನಾದೇಶವನ್ನು ಎಷ್ಟು ಹಣಕ್ಕೆ ಮಾರಿಕೊಂಡಿದ್ದೀರಿ ಎಂದು, ಪಕ್ಷಾಂತರ ಮಾಡಿ ಉಪಚುನಾವಣೆ ಹೇರಿದವರಿಗೆ 15 ಅನರ್ಹರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಇದು ಸ್ವಾಭಿಮಾನಿ ಮತದಾರರ ಚುನಾವಣೆ ಎಂದು ಕಾಂಗ್ರೆಸ್ ತಿಳಿಸಿದೆ.
ಪ್ರಜಾಪ್ರಭುತ್ವ ಮೌಲ್ಯ ಮತ್ತು ಸಂಸದೀಯ ಪ್ರಕ್ರಿಯೆಗಳಿಗೆ ವಂಚಿಸಲು ಯತ್ನಿಸುತ್ತಿದ್ದ ಬಿಜೆಪಿ, ಅಮಿತ್ ಶಾ ಹಾಗೂ ನರೇಂದ್ರಮೋದಿಗೆ ತೀವ್ರ ಮುಖಭಂಗವಾಗಿದೆ. ರಾತ್ರೋರಾತ್ರಿ ರಾಷ್ಟ್ರಪತಿ ಭವನ, ರಾಜಭವನ ದುರುಪಯೋಗ ಮಾಡಿಕೊಂಡ ನರೇಂದ್ರ ಮೋದಿ ಸರಕಾರಕ್ಕೆ ಜನತಾ ನ್ಯಾಯಾಲಯ ಕೂಡ ಶಿಕ್ಷೆ ವಿಧಿಸಬೇಕಿದೆ. ಸತ್ಯ ಮೇವ ಜಯತೆ ಎಂದು ಕಾಂಗ್ರೆಸ್ ಹೇಳಿದೆ.
ಸಂವಿಧಾನದ ಕಗ್ಗೊಲೆ ಮಾಡಿ ಸರಕಾರ ರಚಿಸುವ ನರೇಂದ್ರಮೋದಿ, ಅಮಿತ್ ಶಾ ಪ್ರಯತ್ನ ವಿಫಲಗೊಂಡಿದೆ. ರಾಜಭವನದ ದುರುಪಯೋಗ, ಆಪರೇಷನ್ ಕಮಲ, ಶಾಸಕರಿಗೆ ಹಣದ, ಮಂತ್ರಿಗಿರಿಯ ಆಮಿಷದ ಪ್ರಯತ್ನ, ಮೋದಿ-ಶಾ ಅವರನ್ನು ಬೆತ್ತಲು ಮಾಡಿದೆ. ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಸರಕಾರ ರಚಿಸಲು ಯತ್ನಿಸಿದ ಕುತಂತ್ರಕ್ಕೆ ಮೋದಿ-ಶಾ ದೇಶದ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.